ಸಾಂದರ್ಭಿಕ ಚಿತ್ರ
ಕೊಪ್ಪಳ: ಕರ್ನಾಟಕ ಮುಕ್ತ ಶಾಲೆ (ಕೆಒಎಸ್) ಪರೀಕ್ಷೆಗಳು ಏ.15ರಿಂದ 25ರ ತನಕ ಜಿಲ್ಲಾಕೇಂದ್ರದಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶ ಹೊರಡಿಸಿದ್ದಾರೆ.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕೇಂದ್ರದಲ್ಲಿ ಪರೀಕ್ಷೆ ಜರುಗಲಿವೆ. ನಿಷೇಧಾಜ್ಞೆ ಜಾರಿಯನ್ವಯ ಕೇಂದ್ರದ ಸುತ್ತಲೂ ಯಾವುದೇ ರೀತಿಯ ಎಸ್.ಟಿ.ಡಿ. ಮೊಬೈಲ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.
6ನೇ ತರಗತಿ ಪ್ರವೇಶ: ಅರ್ಜಿ ಆಹ್ವಾನ
ಕೊಪ್ಪಳ: ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆಯ ಮೂಲಕ ಪರಿಶಿಷ್ಟ ಜಾತಿಯ ವಿದಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತಹಶೀಲ್ದಾರ್ರಿಂದ ಆರ್.ಡಿ. ಸಂಖ್ಯೆ ಹೊಂದಿರುವ ಚಾಲ್ತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷದೊಳಗಿರಬೇಕು.
ಪೌರಕಾರ್ಮಿಕರ ಮಕ್ಕಳು, ಸಫಾಯಿ ಕರ್ಮಚಾರಿಗಳ ಮಕ್ಕಳು, ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಕ್ಕಳು, ದೇವದಾಸಿಯರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವವರು, ಕೋವಿಡ್-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಆದ್ಯತೆ ಸಿಗಲಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಇರುವುದಿಲ್ಲ.
ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 3ರ ಒಳಗೆ ಆನ್ಲೈನ್ ಮೂಲಕ ವೆಬ್ಸೈಟ್ https://swd.karnataka.gov.inನಲ್ಲಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.