ADVERTISEMENT

ಕೊಪ್ಪಳ | ಕಂಪನಿ ಹೆಸರಿನಲ್ಲಿ ರೈತರಿಗೆ ಶೋಷಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:10 IST
Last Updated 24 ಸೆಪ್ಟೆಂಬರ್ 2025, 3:10 IST
ಅರುಣ್‌ ಎಸ್. ಹಿರೇಹಾಳ
ಅರುಣ್‌ ಎಸ್. ಹಿರೇಹಾಳ   

ಕೊಪ್ಪಳ: ’ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಪರಿಶಿಷ್ಟ ಪಂಗಡದವರ ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿದಿದ್ದರೂ ತಪ್ಪಿತಸ್ಥರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸದೇ ಕಂಪನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಧಾರವಾಡದ ರೈತ ಅರುಣ್‌ ಎಸ್. ಹಿರೇಹಾಳ ಆರೋಪಿಸಿದ್ದಾರೆ.

‘ಮರಗಳನ್ನು ಕಡಿದ ಬಗ್ಗೆ ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ, ಕುಷ್ಟಗಿ ಸಿಪಿಐ, ಡಿವೈಎಸ್‌ಪಿ, ಹಿಂದಿನ ಹಾಗೂ ಇಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೂ ಕ್ರಮ ವಹಿಸಿಲ್ಲ’ ಎಂದು ಅವರು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯಲ್ಲಿ ರಿನ್ಯೂ ಪವರ್​ ಕಂಪನಿ ಜಿಲ್ಲಾಡಳಿತದ ನೆರವಿನಿಂದ ರೈತರನ್ನು ಶೋಷಣೆ ಮಾಡುತ್ತಿದೆ. ಒಂದೆಡೆ ಮನಬಂದಂತೆ ರೈತರ ಹೊಲಗಳಲ್ಲಿ ಮರಗಳನ್ನು ಕತ್ತರಿಸುತ್ತಿದ್ದರೆ, ಇನ್ನೊಂದೆಡೆ ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನ 19 ಗ್ರಾಮಗಳಲ್ಲಿ ತಂತಿಗಳನ್ನು ಹಾಕಲಾಗಿದೆ. ರಿನ್ಯೂ ಪವರ್​ ಮತ್ತು ಅದರ ಉಪ ಕಂಪನಿಗಳಿಂದ ಕೆಲಸ ಮಾಡಿಸಲಾಗುತ್ತಿದೆ. ಸರ್ಕಾರದ ಕಡದಲ್ಲಿ ಇರದ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರನ್ನು ವಂಚಿಸಲಾಗುತ್ತಿದೆ’ ಎಂದು ಆಪಾದಿಸಿದರು.

ADVERTISEMENT

‘ಕಣ್ಣೆದುರೇ ರೈತರಿಗೆ ವಂಚನೆ ಮಾಡುತ್ತಿದ್ದರೂ ಜಿಲ್ಲಾಡಳಿತ, ಪೊಲೀಸ್​ ಇಲಾಖೆ ತಡೆಯುತ್ತಿಲ್ಲ. ನನ್ನ ಜಮೀನಿನಲ್ಲಿ 35 ಮರಗಳನ್ನು ಯಾವುದೇ ಅನುಮತಿ ಇಲ್ಲದೇ ಕಡಿದು ಹಾಕಿದ್ದಾರೆ. ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವವರ ಬಳಿ ಕಂಪನಿಯ ಗುರುತಿನ ಚೀಟಿಯೇ ಇಲ್ಲ. ಪರಿಹಾರ ದರ ನಿಗದಿಪಡಿಸಿದ ದಾಖಲೆಗಳು ಕೂಡ ಇಲ್ಲ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಸಂಗಮ ಪಾಂಡುರಂಗ, ಭರತ್​ ಮುಗದೂರು, ಟಿ.ರತ್ನಾಕರ, ಶರಣಪ್ಪ ಗುಂಗಾಡಿ ಪಾಲ್ಗೊಂಡಿದ್ದರು.

ನನಗೆ ಆಗಿರುವ ಅನ್ಯಾಯದ ಬಗ್ಗೆ ಲೋಕಾಯುಕ್ತಕ್ಕೆ ಎನ್‌ಸಿಎಸ್‌ಟಿಗೆ ದೂರು ನೀಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ನ್ಯಾಯ ಸಿಗುವ ತನಕ ಹೋರಾಟ ಕೈ ಬಿಡುವುದಿಲ್ಲ.
– ಅರುಣ್‌ ಎಸ್‌. ಹಿರೇಹಾಳ, ರೈತ
ಅರುಣ್‌ ಹಿರೇಹಾಳ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕೆಲಸ ಮಾಡಲಾಗಿದೆ. ಅವರಿಗೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ.
– ಸುರೇಶ ಇಟ್ನಾಳ, ಜಿಲ್ಲಾಧಿಕಾರಿ

ದಾಖಲೆ ಇಲ್ಲ ಎಂದ ಅಧಿಕಾರಿಗಳು

ಹನುಮಸಾಗರ ಹೋಬಳಿಯ ಶಾಡಲಗೇರಿ ಗ್ರಾಮದ ಸರ್ವೆ ಸಂಖ್ಯೆ 32/2ರಲ್ಲಿ 35 ಮರಗಳನ್ನು ಕಡಿಯಲು ಗದಗ ಟ್ರಾನ್ಸ್‌ಮಿಷನ್‌ ಲಿಮಿಟೆಡ್‌/ರಿನ್ಯೂ ಟ್ರಾನ್ಸ್‌ಮಿಷನ್‌ ವೆಂಚರ್ಸ್‌ ಪ್ರವೇಟ್‌ ಲಿಮಿಟೆಡ್‌ ಇವರಿಗೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ನೀಡಿದ ಅನುಮತಿ ಪತ್ರ ಕೊಡುವಂತೆ ಅರುಣ್‌ ಅವರು ಮಾಹಿತಿ ಹಕ್ಕು ಅಧಿನಿಯಮದ ಅಡಿ ಸಲ್ಲಿಸಿದ್ದ ಅರ್ಜಿಗೆ ಹಿಂಬರಹ ನೀಡಿರುವ ಹೆಚ್ಚುವರಿ ಜಿಲ್ಲಾಧಿಕಾರಿ ‘ತಾವು ಕೋರಿರುವ ಮಾಹಿತಿ ಕಾರ್ಯಾಲಯದಲ್ಲಿ ಲಭ್ಯವಿಲ್ಲ’ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.