ADVERTISEMENT

ಕುಷ್ಟಗಿ: ಹಾಳು ಬಿದ್ದ ದಾರಿಗೆ ರೈತರ ಕಾಯಕಲ್ಪ

ಪರಸ್ಪರ ಸಹಕಾರದೊಂದಿಗೆ ರಸ್ತೆ ಅಭಿವೃದ್ಧಿಪಡಿಸಿ ಮಾದರಿಯಾದ ಬೆಂಚಮಟ್ಟಿ ರೈತರು

ನಾರಾಯಣರಾವ ಕುಲಕರ್ಣಿ
Published 20 ಜುಲೈ 2025, 7:03 IST
Last Updated 20 ಜುಲೈ 2025, 7:03 IST
ಕುಷ್ಟಗಿ ತಾಲ್ಲೂಕು ಬೆಂಚಮಟ್ಟಿ ಬಳಿ ದಾರಿಗೆ ಅಡ್ಡಲಾಗಿದ್ದ ಗುಂಡುಕಲ್ಲು ತೆರವುಗೊಳಿಸಿರುವುದು
ಕುಷ್ಟಗಿ ತಾಲ್ಲೂಕು ಬೆಂಚಮಟ್ಟಿ ಬಳಿ ದಾರಿಗೆ ಅಡ್ಡಲಾಗಿದ್ದ ಗುಂಡುಕಲ್ಲು ತೆರವುಗೊಳಿಸಿರುವುದು   

ಕುಷ್ಟಗಿ: ಕಾಲ್ನಡಿಗೆಯಲ್ಲೂ ಹೋಗಲು ಸಾಧ್ಯವಾಗದ ರೀತಿಯಲ್ಲಿ ಹಾಳು ಬಿದ್ದಿದ್ದ ಹೊಲದ ದಾರಿ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ಮರ್ಜಿಗೆ ಕಾಯದೆ ಸ್ವತಃ ನಿರ್ಮಿಸಿಕೊಳ್ಳುವ ಮೂಲಕ ತಾಲ್ಲೂಕಿನ ಬೆಂಚಮಟ್ಟಿ ಗ್ರಾಮದ ರೈತರು, ಮನಸು ಮಾಡಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.

ಅದು ಸುಮಾರು 30ಕ್ಕೂ ಅಧಿಕ ರೈತರು ಹೊಲಗದ್ದೆಗಳಿಗೆ ಹೋಗುವುದಕ್ಕೆ ಅಡ್ಡಿಯಾಗಿದ್ದ ಈ ದಾರಿ ಸುಧಾರಣೆ ವಿಷಯದಲ್ಲಿ ಪ್ರಭು ತಾಳದ ಎಂಬ ಯುವ ರೈತ ಹಲವು ದಶಕಗಳಿಂದಲೂ ಹಾಳುಬಿದ್ದ ಹೊಲದ ದಾರಿಗೆ ಮುಕ್ತಿ ದೊರಕಿಸಿಕೊಡುವಲ್ಲಿ ಇತರೆ ರೈತರಿಗೆ ಪ್ರೇರಣೆ ನೀಡಿದ್ದಾರೆ.

ಹೀಗಿತ್ತು ದಾರಿ: ಅನೇಕ ದಶಕಗಳಿಂದಲೂ ಬಹಳಷ್ಟು ರೈತರು ಹೊಲಗಳಿಗೆ ಹೋಗಿ ಬರುವುದಕ್ಕೆ ಇದೇ ದಾರಿಯನ್ನೇ ಬಳಕೆ ಮಾಡುತ್ತ ಬಂದಿದ್ದಾರೆ. ಕೊರಕಲು, ತಗ್ಗು ಗುಂಡಿಗಳು, ಮುಳ್ಳುಕಂಟಿ, ಗುಂಡುಕಲ್ಲುಗಳಿಂದಾದ ಅಡಚಣೆ ಅಷ್ಟಿಷ್ಟಲ್ಲ. ಆದರೂ ತಮ್ಮ ದೈನಂದಿನ ಕೃಷಿ ಬದುಕು ಸವೆಸುವುದಕ್ಕೆ ಈ ದಾರಿ ಅನಿವಾರ್ಯವಾಗಿತ್ತು. ಮಳೆ ಬಂದರೆ ದೇವರೇ ಕಾಪಾಡಬೇಕು. ವೃದ್ಧರು, ಮಹಿಳೆಯರು, ಮಕ್ಕಳು ನಡೆದು ಹೋಗುವುದಕ್ಕೂ ಅಸಾಧ್ಯವಾಗಿತ್ತು. ಟ್ರ್ಯಾಕ್ಟರ್‌ಗಳ ಮೂಲಕ ಹೋಗಲು ಪ್ರಯಾಸ ಪಟ್ಟರೆ ಅನೇಕ ಬಾರಿ ಟ್ರಾಲಿಗಳು ಪಲ್ಟಿಯಾಗಿ ರೈತರು ಜೀವದಿಂದ ಉಳಿದಿದ್ದೇ ದೊಡ್ಡ ಪವಾಡ ಎಂದು ಸಮಸ್ಯೆ ವಿವರಿಸುತ್ತಾರೆ ರೈತ ಭರಮಪ್ಪ ರಾಂಪೂರ.

ADVERTISEMENT

ಈಗ ಹೀಗಿದೆ ದಾರಿ: ಬೆಂಚಮಟ್ಟಿ ಸೀಮಾಂತರದಲ್ಲಿ ದಾಳಿಂಬೆ ತೋಟ ಹೊಂದಿರುವ ಪ್ರಭು ತಾಳದ ರೈತರನ್ನು ಸಂಘಟಿಸಿ ಸಹಕಾರದೊಂದಿಗೆ ಜೆಸಿಬಿ ಯಂತ್ರದ ಮೂಲಕ ಗುಂಡುಕಲ್ಲುಗಳನ್ನು ತೆರವುಗೊಳಿಸಿ, ದಾರಿ, ಗುಂಡಿಗಳಿಗೆ ಅನೇಕ ಟ್ರ್ಯಾಕ್ಟರ್‌ ಮುರಂ ಹಾಕಿ ಗಟ್ಟಿಮುಟ್ಟುಗೊಳಿಸಿ ಸಮತಟ್ಟು ಮಾಡಿದ್ದಾರೆ.

ಸದ್ಯ 1 ಕಿ.ಮೀ ದಾರಿ ಗುರುತು ಸಿಗದ ರೀತಿಯಲ್ಲಿ ಬದಲಾಗಿದೆ. ರೈತರು ತಮ್ಮ ಹೊಲಗಳಿಗೆ ನಿರಾಯಸವಾಗಿ ಹೋಗಿ ಬರುತ್ತಿದ್ದಾರೆ. ಟ್ರ್ಯಾಕ್ಟರ್‌, ಬೈಕ್‌ ಅಷ್ಟೇ ಅಲ್ಲ ಕಾರುಗಳು ಸಹ ಸುಗಮವಾಗಿ ಸಂಚರಿಸುವಂತೆ ದಾರಿ ಸಿದ್ಧಗೊಂಡು ರೈತರು ನಿಟ್ಟುಸಿರು ಬಿಡುವಂತಾಗಿದೆ.

ಖರ್ಚು ವೆಚ್ಚ: ಸರ್ಕಾರದ ವತಿಯಿಂದ ಈ ದಾರಿ ಮಾಡಿದ್ದರೆ ಕನಿಷ್ಠ ಹತ್ತು ಲಕ್ಷ ರೂಪಾಯಿ ಆದರೂ ಖರ್ಚು ತೋರಿಸಲಾಗುತ್ತಿತ್ತು. ಆದರೆ ಕೇವಲ ₹1.10 ಲಕ್ಷ ವೆಚ್ಚದಲ್ಲಿ ಅದೂ ಗಟ್ಟಿಮುಟ್ಟಿನ ದಾರಿ ನಿರ್ಮಾಣಗೊಂಡಿದೆ. ಸದ್ಯ ಎಲ್ಲ ಖರ್ಚನ್ನೂ ತಾವೇ ಭರಿಸಿದ್ದು ಉಳಿದ ರೈತರೂ ತಲಾವಾರು ವಂತಿಗೆ ಸಂಗ್ರಹಿಸಿ ಹಣ ಕೊಡುವುದಾಗಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ರೈತರಿಗೆ ಈ ದಾರಿ ಬಹಳಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ರೈತ ಪ್ರಭು ತಾಳದ.

ಸುಧಾರಣೆ ನಂತರ ಬದಲಾಗಿರುವ ದಾರಿ
ಯಮನೂರಪ್ಪ
ಹನುಮವ್ವ ಕೊಂಗಿ
ಸುರೇಶ ಮಂಗಳೂರು
ದಾರಿ ಕೆಟ್ಟುಕೆಸರೆದ್ದು ಹೋಗಿತ್ತು ಈಗ ಚೊಲೊ ಆಗೈತಿ. ಹೊಲಕ್ಕೆ ಆರಾಮಾಗಿ ಹೋಗಿ ಬರ್ತೀವ್ರಿ
ಯಮನೂರಪ್ಪ ರೈತ
ಈ ಹಿಂದ ಈ ದಾರಿ ಕೈಕಾಲು ಮುರಕಣಂಗಿತ್ರಿ ಸರ್ಕಾರ ಮಾಡ್ಲಿಕ್ರೂ ಎಲ್ಲರೂ ಸೇರಿ ಭಾಳಾ ಅನುಕೂಲ ಮಾಡ್ಯಾರ
ಹನುಮವ್ವ ಕೊಂಗಿ ರೈತ ಮಹಿಳೆ
ಸರ್ಕಾರದ ಮರ್ಜಿಗೆ ಕಾಯದೆ ರೈತರೇ ನಿರ್ಮಿಸಿಕೊಂಡಿರುವ ರಸ್ತೆ ಗಮನ ಸೆಳೆಯುತ್ತಿದೆ
ಸುರೇಶ ಮಂಗಳೂರು ರೈತ

ನೆರವಿಗೆ ಬಾರದ ನರೇಗಾ:

ನರೇಗಾ ಯೋಜನೆಯಲ್ಲಿ ನಮ್ಮ ಹೊಲ ನಮ್ಮ ದಾರಿ ಕೆಲಸ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುವಂತೆ ಇಲ್ಲಿಯ ರೈತರು ಮಾಡಿದ ಮನವಿಗೆ ಲೆಕ್ಕವಿಲ್ಲ. ಆದರೆ ಕೆಲಸ ಮಾಡದಿದ್ದರೂ ಹಿಂದೆ ಕೊರಡಕೇರಾ ಗ್ರಾ.ಪಂ ಇದೇ ದಾರಿಯಲ್ಲಿ ದಾಖಲೆಯಲ್ಲಿ ಮಾತ್ರ ಕೆಲಸ ತೋರಿಸಿ ನರೇಗಾ ಹಣ ದುರ್ಬಳಕೆ ಮಾಡಿಕೊಂಡಿದೆ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.