ADVERTISEMENT

ಮಳೆಗಾಗಿ ಕಠಿಣ ಉಪವಾಸ ವ್ರತ ಆಚರಣೆ

ಮೈನಳ್ಳಿ ಗ್ರಾಮದ ಹುಲಿಗೆಮ್ಮ ಕಡೆಮನಿ ವ್ರತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 17:29 IST
Last Updated 17 ಜುಲೈ 2018, 17:29 IST
ಕೊಪ್ಪಳ ತಾಲ್ಲೂಕಿನ ಬಿಕನಳ್ಳಿ ಗ್ರಾಮದಲ್ಲಿ ಜುಲೈ 16ರಿಂದ  ವೃತಾಚರಣೆಯಲ್ಲಿ ನಿರತರಾಗಿರುವ ಮೈನಳ್ಳಿ ಗ್ರಾಮದ ಹುಲಿಗೆಮ್ಮ ಕಡೆಮನಿ, ಗ್ರಾಮದ ಮಹಿಳೆಯರು
ಕೊಪ್ಪಳ ತಾಲ್ಲೂಕಿನ ಬಿಕನಳ್ಳಿ ಗ್ರಾಮದಲ್ಲಿ ಜುಲೈ 16ರಿಂದ  ವೃತಾಚರಣೆಯಲ್ಲಿ ನಿರತರಾಗಿರುವ ಮೈನಳ್ಳಿ ಗ್ರಾಮದ ಹುಲಿಗೆಮ್ಮ ಕಡೆಮನಿ, ಗ್ರಾಮದ ಮಹಿಳೆಯರು   

ಕೊಪ್ಪಳ: ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿದೆ. ಇದರಿಂದಾಗಿ ಎಲ್ಲ ರೈತರು ಭತ್ತ, ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಜೂನ್‌ ತಿಂಗಳು ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಇದರಿಂದಾಗಿ ರೈತರು ಆತಂಕದಲ್ಲಿದ್ದಾರೆ.

ಒಂದು ವಾರದಲ್ಲಿ ಮಳೆ ಆಗದಿದ್ದರೇ ಬೆಳೆ ಒಣಗುವ ಭೀತಿ ರೈತರಿಗೆ ಎದುರಾಗಿದೆ. ಇದರಿಂದಾಗಿ ಮಳೆಗಾಗಿ ವಿವಿಧ ಕಡೆಗಳಲ್ಲಿ ಗುರ್ಜಿ ಪೂಜೆ, ಕಂಬಳಿ ಬೀಸುವುದು ಸೇರಿದಂತೆ ವಿವಿಧ ಪದ್ಧತಿಯನ್ನು ರೈತರು ಮಾಡಿದ್ದಾರೆ.

ಆದರೆ ತಾಲ್ಲೂಕಿನ ಬಿಕನಳ್ಳಿ ಗ್ರಾಮದಲ್ಲಿ ಜುಲೈ 16 ಬೆಳಿಗ್ಗೆಯಿಂದಲೇ ಒಬ್ಬ ಮಹಿಳೆ ಐದು ದಿನಗಳಲ್ಲಿ ಮಳೆ ಆಗುತ್ತದೆ ಎಂದು ಹೇಳಿಕೆ ನೀಡಿ, ವ್ರತಾಚರಣೆಯಲ್ಲಿ ಹಮ್ಮಿಕೊಂಡಿದ್ದಾರೆ.

ADVERTISEMENT

ಮೈನಳ್ಳಿ ಗ್ರಾಮದ ಹುಲಿಗೆಮ್ಮ ಕಡೆಮನಿ ಎಂಬ ಮಹಿಳೆ ಊಟ ಮತ್ತು ನೀರು ಮುಟ್ಟದೆ ಕಳೆದ ಮೂರು ದಿನಗಳಿಂದ ಧ್ಯಾನದಲ್ಲಿ ನಿರತರಾಗಿದ್ದಾರೆ. ಇದನ್ನು ನೋಡಲು ಪ್ರತಿನಿತ್ಯ ಅಳವಂಡಿ, ಕಾಟ್ರಳ್ಳಿ, ಹಂದ್ರಾಳ, ಬಿಸರಳ್ಳಿ, ಹಿರೇಸಿಂದೋಗಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಬಂದವರಿಗೆ ಬಿಕನಳ್ಳಿ ಗ್ರಾಮಸ್ಥರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ ಹಿರೇಸಿಂದೋಗಿ ಹಾಗೂ ಮೈನಳ್ಳಿಯಲ್ಲಿಯೂ ವ್ರತಾಚರಣೆ ಮಾಡಿದ್ದರು. ಬಳಿಕ ಮಳೆ ಆಗಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಐದು ದಿನಗಳ ಕಾಲ ವ್ರತ ನಡೆಸುತ್ತೇನೆ. ಅಷ್ಟರೊಳಗೆ ಮಳೆ ಆಗುತ್ತದೆ. ಇಲ್ಲವಾದರೇ ಮಳೆ ಆಗುವವರೆಗೆ ವ್ರತವನ್ನು ಮುಂದುವರೆಸುತ್ತೇನೆ ಎಂದು ಹುಲಿಗೆಮ್ಮ ಹೇಳುತ್ತಾರೆ. ಆದರೆ ಗ್ರಾಮಸ್ಥರು ಐದು ದಿನಗಳ ಕಳೆದ ಮೇಲೆ ಅವರನ್ನು ವ್ರತ ಮುಗಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವ್ರತಕ್ಕೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಗ್ರಾಮದ ಮಹಿಳೆಯರು ಕೂಡಾ ವ್ರತದಲ್ಲಿ ಭಾಗವಹಿಸಿದ್ದಾರೆ. ಪುರುಷರು ಭಜನೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಮೆರೆಯುತ್ತಿದ್ದಾರೆ. ವರುಣನ ನಿರೀಕ್ಷೆಗಾಗಿ ಪ್ರತಿದಿನ ಪೂಜೆ ಕೂಡಾ ಮಾಡಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.