ADVERTISEMENT

ಗಂಗಾವತಿ | ಹಬ್ಬದ ಖರೀದಿ: ಹೆಚ್ಚಿದ ಸಂಚಾರ ದಟ್ಟಣೆ

ಗಂಗಾವತಿಯಲ್ಲಿ ಕಳೆಗಟ್ಟಿದ ದೀಪಾವಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:57 IST
Last Updated 21 ಅಕ್ಟೋಬರ್ 2025, 4:57 IST
ಗಂಗಾವತಿಯ ಗಾಂಧಿವೃತ್ತದಲ್ಲಿ‌ ದೀಪಾವಳಿ ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಆಗಮಿಸಿದ ಸಾರ್ವಜನಿಕರು ರಸ್ತೆಗೆ ವಾಹನಗಳನ್ನು ನಿಲ್ಲಿಸಿದ್ದರು
ಗಂಗಾವತಿಯ ಗಾಂಧಿವೃತ್ತದಲ್ಲಿ‌ ದೀಪಾವಳಿ ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಆಗಮಿಸಿದ ಸಾರ್ವಜನಿಕರು ರಸ್ತೆಗೆ ವಾಹನಗಳನ್ನು ನಿಲ್ಲಿಸಿದ್ದರು   

ಗಂಗಾವತಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜನರು, ವರ್ತಕರು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿಕೊಂಡು, ಸೋಮವಾರ ನರಕ ಚತುರ್ದಶಿ ನಿಮಿತ್ತ ಗಂಗಾವತಿ ನಗರದ ವಿವಿಧ ವೃತ್ತದಲ್ಲಿ ಆಲಂಕಾರಿಕ ವಸ್ತು, ಪೂಜಾ ಸಾಮಗ್ರಿ, ಹೂ, ಹಣ್ಣುಗಳ ಮಾರಾಟ, ಖರೀದಿ ಭರಾಟೆ ಜೋರಾಗಿ ನಡೆಯಿತು.

ಭಾನುವಾರ ಸಂಜೆಯಿಂದಲೇ ವಸ್ತುಗಳ ಖರೀದಿ ನಡೆದಿದ್ದು, ಸೋಮವಾರ ಬೆಳಿಗ್ಗೆ ನಗರದಲ್ಲಿ ಎತ್ತ ನೋಡಿದರೂ ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದಿ‌ದ್ದರು.

ಬೆಳಿಗ್ಗೆ ಗಾಂಧಿ, ಮಹಾವೀರ, ಸಿಬಿಎಸ್ ವೃತ್ತ, ರಾಯಚೂರು ರಸ್ತೆ, ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ, ದುರ್ಗಾದೇವಿ ದೇವಸ್ಥಾನದ ಬಳಿ ಪೂಜೆಗೆ ಬೇಕಾದ ಹೂವು, ವಿದ್ಯುತ್ ಆಲಂಕಾರಿಕ ವಸ್ತು, ಹಣ್ಣು, ಬಾಳೆದಿಂಡು, ಕಬ್ಬು, ಚೆಂಡೂ ಹೂವು ಸೇರಿ ಅಗತ್ಯ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ADVERTISEMENT

ಸಂಚಾರ ದಟ್ಟಣೆ, ವಾಹನ ಸವಾರರ ಪರದಾಟ: ಬೆಳಕಿನ ದೀಪಾವಳಿ ಎಲ್ಲರಿಗೂ ಅಚ್ಚುಮೆಚ್ಚಿನ ಹಬ್ಬ. ವ್ಯಾಪಾರಸ್ಥರು ಅಂಗಡಿಗಳಲ್ಲಿ ಪೂಜೆ ನೆರವೇರಿಸಿ, ಲಕ್ಷ್ಮಿಯನ್ನು ಕೂಡಿಸುತ್ತಾರೆ. ಪೂಜೆಗೆ ಸಾಮಗ್ರಿ ಖರೀದಿಗೆ ಆಗಮಿಸಿದ ಪುರುಷರು ರಸ್ತೆಯಲ್ಲಿ ಎಲ್ಲೆಂದರಲ್ಲೆ ವಾಹನಗಳು ಬಿಟ್ಟು ಖರೀದಿಗೆ ಹೋದ ಕಾರಣ ಗಾಂಧಿ, ಮಹಾವೀರ, ಗುಂಡಮ್ಮ ಕ್ಯಾಂಪ್ ಬಳಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಲು ಹರಸಾಹಸಪಟ್ಟರು.

ವಸ್ತುಗಳ ಬೆಲೆ ಎಷ್ಟೆಷ್ಟು?: ಮಾರುಕಟ್ಟೆಯಲ್ಲಿ ಬಾಳೆದಿಂಡು ಜೋಡಿ ₹20-₹70, ಮಾವಿನ ಎಲೆ ₹20-₹50, ಕಬ್ಬು ಜೋಡಿ ₹30 ಮಾರಾಟ ಮಾಡಲಾಯಿತು. ಆ್ಯಪಲ್ ಕೆಜಿಗೆ ₹140-₹200, ಆರೆಂಜ್ ₹180, ದಾಳಿಂಬೆ₹150- ₹200, ಸಪೋಟ ₹120, ಬಾಳೆಹಣ್ಣು ₹70- ₹90,ದ್ರಾಕ್ಷಿ ₹ 200, ಪೇರಲ ₹60-₹80, ಮೊಸಂಬಿ ₹130, ಬೂದು ಕುಂಬಳಕಾಯಿ ₹120, ಬಾಳೆಗೊನೆ ₹150-₹200 ಹಣಕ್ಕೆ ಮಾರಾಟ‌‌ ನಡೆಯಿತು.

ಇಳಿಯದ ಹೂವಿನ ಬೆಲೆ: ದೀಪಾವಳಿ ಹಬ್ಬದ ವಾರಕ್ಕೂ ಮುನ್ನವೇ ಹೂವಿನ ಬೆಲೆ ಗಗನಕ್ಕೆ ಏರಿ ನಿಂತಿದ್ದು, ಗ್ರಾಹಕರಿಗೆ ಹೂವಿನ ಬೆಲೆ ಏರಿಕೆ ಬಿಸಿ ತಟ್ಟಿದೆ. ಇದರಿಂದ ಗ್ರಾಹಕರು ಹೂವಿನ ಖರೀದಿಗೆ ಹಿಂದೇಟು ಹಾಕಿದ ದೃಶ್ಯಗಳು ಕಂಡು ಬಂದವು. ಇದರ ನಡುವೆ ಗುಲಾಬಿ ಕೆಜಿಗೆ ₹250-₹ 300, ಸೇವಂತಿಗೆ ₹200-₹500, ಮಲ್ಲಿಗೆ ₹900, ಚೆಂಡೂ ಹೂ ₹100, ದುಂಡು ಮಲ್ಲಿಗೆ ₹1200 ಬೆಲೆಯಿದೆ. 

ಗಂಗಾವತಿ ದುರ್ಗಾದೇವಿ ದೇವಸ್ಥಾನದ ಬಳಿನ ರಸ್ತೆಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಸಾರ್ವಜನಿಕರು ಹೂ ಬಾಳೆದಿಂಡು ಖರೀದಿಸಿದರು

ಇಳಿಯದ ಹೂವಿನ ಬೆಲೆ ವಸ್ತುಗಳ ಖರೀದಿ ಭರಾಟೆ 

ಯಾವುದು ಖರೀದಿ ಮಾಡಲು ಮುಂದಾದರೂ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ಬಾರಿ ಒಂದೇ ಬೆಳೆಯಿದ್ದು ಹಬ್ಬ ಆಚರಣೆಗೆ ರೈತರು ಅಂಗಡಿಗಳ ಮಾಲೀಕರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ.

- ಅನಿಲಕುಮಾರ ಗಂಗಾವತಿ ನಿವಾಸಿ

ಹೂವಿನ ಬೆಲೆ ನಿರಂತರವಾಗಿ ಏರಿಕೆಯಲ್ಲಿದ್ದು ಗ್ರಾಹಕರು ಹೂವು ಖರೀದಿಗೆ ಮುಂದಾಗುತ್ತಿಲ್ಲ. ವ್ಯಾಪಾರ ಅಷ್ಟಕಷ್ಟೇ ಇದೆ

-ಶಂಕರ್ ಹೂಗಾರ ಹೂವಿನ ವ್ಯಾಪಾರಿ ಗಾಂಧಿ ವೃತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.