ADVERTISEMENT

ಬುತ್ತಿ ತಂದ ಸ್ನೇಹಿತರು...

ಮೆಹಬೂಬ ಹುಸೇನ
Published 1 ಆಗಸ್ಟ್ 2021, 2:58 IST
Last Updated 1 ಆಗಸ್ಟ್ 2021, 2:58 IST
ಕೊರೊನಾ ಸಮಯದಲ್ಲಿ ನೆರವಿಗೆ ಬಂದ ಕನಕಗಿರಿಯ ಕಲ್ಲೇಶ ಅಕ್ಕನವರ ಗೆಳೆಯರು
ಕೊರೊನಾ ಸಮಯದಲ್ಲಿ ನೆರವಿಗೆ ಬಂದ ಕನಕಗಿರಿಯ ಕಲ್ಲೇಶ ಅಕ್ಕನವರ ಗೆಳೆಯರು   

ಕನಕಗಿರಿ: ಒಂದೇ ಮನೆಯಲ್ಲಿ ನಾಲ್ಕು ಜನ ಕೊರೊನಾ ಸೋಂಕಿತರಾಗಿದ್ದರು. ತಂದೆ ಬಸವರಾಜ ಅಕ್ಕನವರ, ತಾಯಿ ಗೌರಮ್ಮ, ಮಗ ಕಲ್ಲೇಶ ಅವರು ಗಂಗಾವತಿ ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಬಸವರಾಜ ಅವರ ಹಿರಿಯ ಮಗ ವಿಶ್ವನಾಥ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು.

ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಲಿಂಗಾಯತ ಖಾನಾವಳಿಯು ಲಾಕ್‌ಡೌನ್ ವೇಳೆ 50 ದಿನ ಬಂದ್ ಆಗಿತ್ತು. ಖಾನಾವಳಿ ಬಿಟ್ಟರೆ ಬೇರೆ ಕೆಲಸ ಕುಟುಂಬಕ್ಕೆ ಗೊತ್ತಿಲ್ಲ. ಅರ್ಥಿಕ ಸಮಸ್ಯೆ ದೊಡ್ಡ ಚಿಂತೆಯಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದವರು ಕಲ್ಲೇಶ ಅಕ್ಕನವರ ಗೆಳೆಯರು ಮತ್ತು ಸಹೋದರ ಸಂಬಂಧಿ ಸಂದೀಪ.

ಕೊರೊನಾ ಪೀಡಿತರಾಗಿದ್ದ ತಂದೆ-ತಾಯಿಯ ಆರೈಕೆ ಮಾಡುತ್ತಿದ್ದ ಕಲ್ಲೇಶ ಅವರಿಗೆ ವಿಷಮಶೀತ ಜ್ವರ ಕಾಡಿತು. ಸ್ನೇಹಿತ ಸಲೀಂ ಆಗೋಲಿ ಅವರು ತನ್ನ ಬೈಕ್‌ನಲ್ಲಿ ಕಲ್ಲೇಶ ಅಕ್ಕನವರಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೋಗಿ ಪರೀಕ್ಷೆ ಮಾಡಿಸಿದಾಗ ಕಲ್ಲೇಶನಿಗೂ ಸಹ ಕೊರೊನಾ ಸೋಂಕು ತಗುಲಿತ್ತು.

ADVERTISEMENT

ಯಾವುದೇ ಭಯ ಪಡದೆ ಆಗೋಲಿ ಮತ್ತೆ ಅದೇ ಬೈಕ್‌ನಲ್ಲಿ ಇಲ್ಲಿನ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಹಿಡಿದು ಧೈರ್ಯ ತುಂಬಿದರು. 15 ದಿನ ಗಂಗಾವತಿ ಆಸ್ಪತ್ರೆಯಲ್ಲಿದ್ದಾಗ ಸ್ನೇಹಿತರಾದ ಮೆಹಬೂಬ, ಮನ್ಸೂರಅಲಿ, ಆರ್ಹಾಳದ ಕಿರಣಕುಮಾರ ದೇಸಾಯಿ, ಮುರ್ತುಜಾ, ಮಂಜುನಾಥ, ಕಾರ್ತಿಕ ಚಿತ್ರಕಿ ಮತ್ತು ಸಂದೀಪ ದಿನವೂ ಮನೆಯಿಂದ ಊಟದ ಬುತ್ತಿ ತಂದುಕೊಟ್ಟರು. ಅಗತ್ಯ ಔಷಧಿಗಳನ್ನು ನೀಡಿ, ಆರೈಕೆ ಮಾಡಿ ಧೈರ್ಯ ತುಂಬಿದರು.

ಹಣಕಾಸಿನ ಸಮಸ್ಯೆ ಕಾಡಿದಾಗ ಸಹ ಕಿರಣಕುಮಾರ ದೇಸಾಯಿ ನೆರವು ನೀಡಿದ್ದಾರೆ. ಈ ಸಮಯದಲ್ಲಿ ಗೆಳೆಯರ ಸೇವೆ ಸ್ಮರಣೀಯ ಎಂದು ಕಲ್ಲೇಶ ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.