ADVERTISEMENT

ಗಂಗಾವತಿ: ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 15:25 IST
Last Updated 9 ಏಪ್ರಿಲ್ 2025, 15:25 IST
ಗಂಗಾವತಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು
ಗಂಗಾವತಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸಿದರು   

ಗಂಗಾವತಿ: ನಗರದ ತಾಲ್ಲೂಕು ಪಂಚಾಯಿತಿ ಮಂಥನ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಲೋಕಾಯುಕ್ತ ವತಿಯಿಂದ ತಾಲ್ಲೂಕು ಮಟ್ಟದ ಸಾರ್ವಜನಿಕರ ಕುಂದು-ಕೊರತೆಗಳ ಅಹವಾಲು ಸ್ವೀಕಾರ ಸಭೆ ಜರುಗಿತು.

ವಡ್ಡರಹಟ್ಟಿ ಗ್ರಾಮದ ಸರ್ವೆ ನಂ 34/3/2ರಲ್ಲಿ 2.30 ಎಕರೆ ಮಾಸ್ಟರ್ ಪ್ಲಾನ್ ಆಧಾರಿತ, ಡೀಮ್ಡ್ ಭೂ-ಪರಿವರ್ತನೆ ಆಗಿರುವ ಜಮೀನಿಗೆ ಈ ಹಿಂದಿನ ಗ್ರಾ.ಪಂ ಪಿಡಿಒ ಮಂಜುನಾಥ ಅಂಗಡಿ ಅಧಿಕಾರ ವ್ಯಾಪ್ತಿ ಮೀರಿ, ವಸತಿ ವಿನ್ಯಾಸ ನೀಡಿದ್ದಾರೆ ಎಂದು  ವಡ್ಡರಹಟ್ಟಿ ಗ್ರಾಮದ ಹನುಮನಗೌಡ ಎಂಬುವವರು ಪ್ರಶ್ನಿಸಿದರು.

ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದಿನ ಪಿಡಿಒ ಸುರೇಶ ಚಲವಾದಿ ಅವರನ್ನು ಕ್ರಮದ ಬಗ್ಗೆ ಪ್ರಶ್ನಿಸಿದಾಗ, ವಸತಿ ವಿನ್ಯಾಸ ನನ್ನ ಅವಧಿಯಲ್ಲಿ ನಡೆದಿಲ್ಲ. ಕ್ರಮದ ಭಾಗವಾಗಿ ನೋಟಿಸ್ ನೀಡಲಾಗಿದೆ ಎಂದರು. ಕೂಡಲೇ ಅನಧಿಕೃತ ವಿನ್ಯಾಸ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಹೊಸಕೇರಾ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಹಾಗೂ ನರೇಗಾ ಕಾಮಗಾರಿಗಳ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಗಾಗಿ ಪಿಡಿಒ ಅವರು ದಾಖಲೆಗಳನ್ನು ನೀಡಲು ₹47 ಸಾವಿರ ಸಂದಾಯ ಮಾಡುವಂತೆ ಹಿಂಬರಹ ನೀಡಿದ್ದಾರೆ ಎಂದು ಕೊಟ್ಟೂರೇಶ್ವರ ಕ್ಯಾಂಪಿನ ಸಾಮಾಜಿಕ ಕಾರ್ಯಕರ್ತ ನಾಗೇಶ ಗುನ್ನಾಳ ಅವರು ಲೋಕಾಯುಕ್ತರ ಮುಂದೆ ಮಾಹಿತಿ ಬಿಚ್ಚಿಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ,  ದೂರುದಾರರ ಕೇಳಿದ ಕಾಮಗಾರಿಯಲ್ಲಿ ಯಾವ ಲೋಪವು ಆಗಿಲ್ಲ. ಅವರು ಕೇಳಿದ ಎಲ್ಲ ಮಾಹಿತಿ, ದಾಖಲೆಗಳಲ್ಲಿ ಇದೆ. ಅವರು ಹಣ ಸಂದಾಯ ಮಾಡಿದರೆ ನೀಡಲಾಗುತ್ತದೆ ಎಂದರು. ಇದಕ್ಕೆ ಲೋಕಾಯುಕ್ತರು ದೂರುದಾರರಿಗೆ ಹಣ ಸಂದಾಯ ಮಾಡಿ ದಾಖಲೆಗಳನ್ನು ಪಡೆಯುವಂತೆ ಸೂಚಿಸಿದರು.

ಸುಳ್ಳು ದಾಖಲೆಗಳ ಮೂಲಕ ಅಂಗನವಾಡಿ ಕಾರ್ಯಕರ್ತರೊಬ್ಬರನ್ನು ನೇಮಕ ಮಾಡಿರುವ ಸಿಡಿಪಿಒ, ಜಮೀನಿಗೆ ರಸ್ತೆ ಬಿಡದೇ, ತಕಾರರು ಮಾಡಿತ್ತಿರುವ ಕುರಿತು, ಡಿಎಚ್ಒ ಅವ್ಯವಹಾರದ ಬಗೆಗಿನ ದೂರುಗಳ ಚರ್ಚೆಗಳು ನಡೆದವು. ಈ ವೇಳೆ ಕೆಲ ದೂರುದಾರರು ಲೋಕಾಯುಕ್ತಗೆ ಅರ್ಜಿ ಸಲ್ಲಿಸಿದರೂ ನ್ಯಾಯ ಸಿಗುತ್ತಿಲ್ಲ. ವಿಳಂಬ ನೀತಿ ಅನುರಿಸಲಾಗುತ್ತದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ಮಾತನಾಡಿ, ಸಾರ್ವಜನಿಕರು ಸರ್ಕಾರ ಇಲಾಖೆಗಳಲ್ಲಿನ ಯೋಜನೆ, ಕಾಮಗಾರಿಗಳ ಬಗ್ಗೆ ಅರ್ಜಿ ಮೂಲಕ ಮಾಹಿತಿ ಕೇಳಿದರೆ ಕೂಡಲೇ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಸಾರ್ವಜನಿಕರ ಹಿತಾಸಕ್ತಿಗಾಗಿ ಲೋಕಾಯುಕ್ತ ಕಚೇರಿ ಮತ್ತು ಸಹಾಯವಾಣಿ ಕೇಂದ್ರ ದೂರವಾಣಿ ಸಂಖ್ಯೆಯ ಮಾಹಿತಿ ಎಲ್ಲ ಇಲಾಖೆಗಳಲ್ಲಿ ಪ್ರದರ್ಶಿಸಬೇಕು ಎಂದರು.

ರಾಯಚೂರು‌ ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪ ಮಾತನಾಡಿ, ಪ್ರಸಕ್ತ ಸಾಲಿನ ಜನವರಿ ತಿಂಗಳಿಂದ ಈವರೆಗೆ ಸಕಾಲ ಮತ್ತು ಆರ್.ಟಿ.ಐ ಕಾಯ್ದೆಯಡಿ ಸಾರ್ವಜನಿಕರಿಂದ ಬಂದ ಅರ್ಜಿಗಳ ಮಾಹಿತಿಯನ್ನು  ಬುಧವಾರದ ಒಳಗಾಗಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಾಯುಕ್ತ ಪೊಲೀಸ್‌ ಇಲಾಖೆಯ ಸುನೀಲ್, ಚಂದ್ರು ಇ.ಟಿ, ಸಿಬ್ಬಂದಿಗಳಾದ ಬಸವರಾಜ, ಮಂಜುನಾಥ, ನಾಗಪ್ಪ, ಶೈಲಾ, ಕಾರಟಗಿ ತಾ.ಪಂ.ಇಒ ಲಕ್ಷ್ಮಿದೇವಿ, ಗಂಗಾವತಿ ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಕಾರಟಗಿ ತಹಶೀಲ್ದಾರ್‌ ಕುಮಾರಸ್ವಾಮಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.