ಕುಕನೂರು: ‘ಕ್ಷೇತ್ರದ ಕೆರೆಗಳ ಪುನಶ್ಚೇತನದಿಂದ ರೈತರ ಆರ್ಥಿಕ ಸಂಪನ್ಮೂಲ ಹೆಚ್ಚಿಸಿದ್ದೇನೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲ್ಲೂಕಿನ ಆಡೂರು ಗ್ರಾಮದಲ್ಲಿ ಶನಿವಾರ ₹4 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿವೆ ಎಂದರು.
ಪ್ರಾಮಾಣಿಕ ರಾಜಕಾರಣಿ ಮಾಜಿ ಶಾಸಕ ಶಿರೂರು ವೀರಭದ್ರಪ್ಪ ಅವರ ಮಾರ್ಗದರ್ಶನದಲ್ಲಿ ನಾವು ಕೂಡ ಪ್ರಾಮಾಣಿಕ ಕಾರ್ಯವನ್ನು ಮಾಡಿದ್ದೇನೆ. ಹಿಂದಿನ ಶಾಸಕರು ಕೇವಲ ಡಾಂಭಿಕ ಮಾತಗಳನ್ನು ಆಡಿ ಜನರ ಕಣ್ಣಿಗೆ ಮಣ್ಣು ಎರಚಿ ಜನರ ಹತ್ತಿರ ಸಿಗದೇ, ದೂರದ ನಗರಗಳಲ್ಲಿ ವಾಸಿಸುವ ರಾಜಕಾರಣಿಗಳನ್ನು ನಂಬಬೇಡಿ ಎಂದರು.
ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಸಿಮೆಂಟ್ ರಸ್ತೆ, ವಸತಿ ನಿರ್ಮಾಣ, ಕೆರೆ, ಚೆಕ್ಡ್ಯಾಂ, ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆ, ಸಾರಿಗೆ ವ್ಯವಸ್ಥೆ, ವೃದ್ಧಾಪ್ಯ ವೇತನ ಹಾಗೂ ರೈತರ ಯೋಜನೆಗಳಾದ ಕೃಷಿ ಸಮ್ಮಾನ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿವೆ. ಇವುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.ಕ್ಷೇತ್ರದಲ್ಲಿ 30 ವರ್ಷಗಳ ಕಾಲ ಆಡಳಿತ ನಡೆಸಿದ ಮಾಜಿ ಶಾಸಕರು ಜನರ ದಾರಿ ತಪ್ಪಿಸಿ, ರೈತರ ಕಾಳಜಿಯನ್ನ ಮಾಡದೆ, ಕೇವಲ ಕಟ್ಟಡಗಳ ನಿರ್ಮಾಣವನ್ನೇ ದೊಡ್ಡ ಸಾಧನೆ ಎನ್ನುವಂತೆ ಫೋಸು ನೀಡುತ್ತಿದ್ದಾರೆ ಎಂದರು. ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಚನಬಸಪ್ಪ ಆಡೂರು, ಮುಖಂಡರಾದ ಹನುಮಂತಪ್ಪ ರೆಡ್ಡಿ, ಪ್ರಭು ಮುತ್ತಾಳ, ಹೊನ್ನಪ್ಪ ದೊಡಮನಿ, ವೀರೇಶ್ ನಾಗೋಜಿ, ಹೇಮಣ್ಣ ಹೊಸಮನಿ, ಸಂಗಪ್ಪ ಮುತ್ತಾಳ, ಪಿಎಂಜಿಎಸ್ ವೈ ಜಿಲ್ಲಾ ಅಧಿಕಾರಿ ಅಶೋಕ ಚಲವಾದಿ, ಬಸಲಿಂಗಪ್ಪ ಭೂತೆ, ಸಿ.ಎಚ್ ಪೋಲಿಸ್ ಪಾಟೀಲ್, ಶರಣಪ್ಪ ಮಂಡಲಗಿರಿ, ವೀರಣ್ಣ ಹುಬ್ಬಳ್ಳಿ, ಮಾರುತಿ ಗಾವರಾಳ ಹಾಗೂ ಕಳಕಪ್ಪ ಕಂಬಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.