
ಕೊಪ್ಪಳದ ಅಂಜನಾದ್ರಿಯಲ್ಲಿ ಹನುಮ ಮಾಲಾಧಾರಿಗಳು ಜಮಾಯಿಸಿದ್ದರು
–ಚಿತ್ರ: ಭರತ್ ಕಂದಕೂರ
ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ವ್ರತದ ಅಂಗವಾಗಿ ಮಾಲೆ ಧರಿಸಿದ್ದ ನಾಡಿನ ವಿವಿಧೆಡೆಯ ಲಕ್ಷಾಂತರ ಹನುಮ ಮಾಲಾಧಾರಿಗಳು ತಾಲ್ಲೂಕಿನ ಅಂಜನಾದ್ರಿ ಬೆಟ್ಟದ, ಆಂಜನೇಯನ ಸನ್ನಿಧಿಯಲ್ಲಿ ಬುಧವಾರ ಮಾಲೆ ವಿಸರ್ಜನೆ ಮಾಡಿದರು. ಈ ಸಂಭ್ರಮದಲ್ಲಿ ವಿದೇಶಿ ಪ್ರಜೆಗಳೂ ಭಾಗಿಯಾದರು.
ಭಕ್ತರು ಸಂಕಲ್ಪಕ್ಕೆ ತಕ್ಕಂತೆ ಕೇಸರಿ ಬಟ್ಟೆ ಹಾಗೂ ಕೊರಳಲ್ಲಿ ತುಳಸಿಯ ಮಾಲೆ ಧರಿಸಿ ಪ್ರತಿವರ್ಷವೂ ಅಂಜನಾದ್ರಿಯಲ್ಲಿಯೇ ವಿಸರ್ಜನೆ ಮಾಡುವುದು ವಾಡಿಕೆ. 2008ರಲ್ಲಿ ಇಲ್ಲಿ ಮಾಲೆ ವಿಸರ್ಜಿಸುವ ಸಂಪ್ರದಾಯ ಆರಂಭವಾಗಿದ್ದು ಹಿಂದಿನ ಎಲ್ಲ ವರ್ಷಗಳಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಬುಧವಾರ ಹನುಮಮಾಲೆ ವಿಸರ್ಜಿಸಲು ಬಂದಿದ್ದ ಭಕ್ತರು ಸೂರ್ಯೋದಯದ ಸಮಯದಲ್ಲಿ ಬೆಟ್ಟ ಏರುವಾಗ ಕಂಡ ಬಗೆ
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಂದ ಲಕ್ಷಾಂತರ ಭಕ್ತರು 575 ಮೆಟ್ಟಿಲುಗಳುಳ್ಳ ಬೆಟ್ಟವೇರಲು ಸರತಿಗಾಗಿ ಮುಗಿಬಿದ್ದಾಗ ನೂಕಾಟ ನಡೆಯಿತು. ಪೊಲೀಸರು ತಿರುಪತಿ ಮಾದರಿಯಲ್ಲಿ ಒಂದಷ್ಟು ಮಾಲಾಧಾರಿಗಳ ತಂಡವನ್ನು ಮಾಡಿ ಹಂತಹಂತವಾಗಿ ಬೆಟ್ಟಕ್ಕೆ ಕಳುಹಿಸಿ ದರ್ಶನ ಸರಾಗವಾಗುವಂತೆ ಮಾಡಿದರು. ಅಂಜನಾದ್ರಿ ಸಂಪೂರ್ಣ ಕೇಸರಿಮಯವಾಗಿತ್ತು. ಮಂಗಳವಾರ ರಾತ್ರಿಯಿಂದಲೇ ಮಾಲೆ ವಿಸರ್ಜನೆ ಆರಂಭವಾಗಿತ್ತು.
ಹನುಮಮಾಲೆ ವಿಸರ್ಜನೆ ಅಂಗವಾಗಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಮೇಲೆ ಬುಧವಾರ ಕಂಡ ಭಕ್ತರು ಒಡೆದ ತೆಂಗಿನಕಾಯಿಗಳ ರಾಶಿ
ಕೊಪ್ಪಳ, ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಗಳು ಸೇರಿದಂತೆ ವಿವಿಧೆಡೆಯಿಂದ ಭಕ್ತರು ವಾಹನಗಳು ಹಾಗೂ ನೆರೆಯ ಜಿಲ್ಲೆಗಳಿಂದ ಅನೇಕರು ಪಾದಯಾತ್ರೆ ಮೂಲಕ ಬಂದು ಬೆಟ್ಟವೇರಿ ಭಕ್ತಿ ಸಮರ್ಪಿಸಿದರು. ಮಾರ್ಗದುದ್ದಕ್ಕೂ ಆಂಜನೇಯ ಹಾಗೂ ರಾಮನ ಸ್ಮರಣೆಯ ಹಾಡುಗಳು ಮೊಳಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.