ಸಾವು
ಪ್ರಾತಿನಿಧಿಕ ಚಿತ್ರ
ಹನುಮಸಾಗರ: ತಾಲ್ಲೂಕಿನ ಹಿರೇಗೊಣ್ಣಾಗರ ಗ್ರಾಮದ ಬಳಿ ವಿವಾಹಿತೆಯೊಬ್ಬರ ಶವ ಸೀತಾಫಲ ಗಿಡದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪುಷ್ಪಾವತಿ ಜಾಲಿಮರದ (23) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮೃತಳ ತಂದೆ ಹಾಸನ ಜಿಲ್ಲೆ ಅರಕಲಗೋಡು ತಾಲ್ಲೂಕಿನ ವೆಂಕಟೇಶ ಚಿಕ್ಕಯ್ಯ ಎಂಬುವವರು ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ಮರಿಯಪ್ಪ ಜಾಲಿಮರದ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ಸ್ಟಾಗ್ರಾಂದಲ್ಲಿ ಪರಿಚಯವಾಗಿದ್ದ ಹಿರೇಗೊಣ್ಣಾಗರ ಮೂಲದ ಮರಿಯಪ್ಪ ಜಾಲಿಮರದ ಎಂಬಾತನೊಂದಿಗೆ 2023ರಲ್ಲಿ ಕುಷ್ಟಗಿ ಪಟ್ಟಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಸಂಸಾರ ಉತ್ತಮವಾಗಿ ಸಾಗಿತ್ತಾದರೂ ನಂತರ ಮರಿಯಪ್ಪ ತನ್ನ ಪತ್ನಿ ಪುಷ್ಪಾ ಅವರಿಗೆ ಪದೇ ಪದೇ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ. ಸೆ.8ರಂದು ಮನೆಯವರಿಗೆ ಕರೆ ಮಾಡಿದ್ದ ಪುಷ್ಪಾವತಿ ಗಂಡನ ಹಿಂಸೆ ತಾಳಲಾಗುತ್ತಿಲ್ಲ. ಬಂದು ಕರೆದುಕೊಂಡು ಹೋಗಿ ಇಲ್ಲದಿದ್ದರೆ ನನ್ನ ಜೀವ ಉಳಿಸುವುದಿಲ್ಲ ಎಂದು ಗೋಗರೆದಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆದರೆ ಸೆ.11 ರಂದು ಕರೆ ಮಾಡಿದ ಮೃತಳ ಮಾವ ನಿಂಗಪ್ಪ, 'ನಿಮ್ಮ ಮಗಳು ಸೀತಾಫಲ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಮಾಹಿತಿ ನೀಡಿದ್ದರು. ಆದರೆ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ಗಂಡ ಮರಿಯಪ್ಪನೇ ಕೊಲೆ ಮಾಡಿ ನಂತರ ಗಿಡದಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಇರಿಸಿದ್ದಾರೆ ಎಂದು ಮೃತಳ ತಂದೆ ದೂರಿನ ಅನ್ವಯ ಎಫ್ಐಆರ್ದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.