ಅಳವಂಡಿ: ‘ಕಲ್ಲಳ್ಳಿ ಸೀಮಾದಲ್ಲಿ ಆಂಜನೇಯ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರಿಗೆ ಗ್ರಾಮದ ಮುಖಂಡರು, ಹಿರಿಯರು ಮನವಿ ಸಲ್ಲಿಸಿದರು.
‘ಈ ಬೇಡಿಕೆ ಕಳೆದ 40 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದು ಶಿವಮೂರ್ತಿ ಸ್ವಾಮಿಗಳ ಕನಸಿನ ಯೋಜನೆಯಾಗಿತ್ತು. ಇದು ಜಾರಿಯಾಗದ ಕಾರಣ ಈ ಭಾಗದ ರೈತ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಯೋಜನೆ ಜಾರಿಯಾದರೆ ಅಳವಂಡಿ, ರಘುನಾಥನಹಳ್ಳಿ, ಹಟ್ಟಿ, ಹೈದರನಗರ, ಕ್ಯಾಸಲಾಪೂರ, ಹಲವಾಗಲಿ, ನಿಲೋಗಿಪುರ, ಬೋಚನಹಳ್ಳಿ, ಭೈರಾಪೂರ, ಕಂಪ್ಲಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಸುಮಾರು 3500 ರಿಂದ 4000 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 2000 ಕೊಳವೆಬಾವಿಗಳಿವೆ. ಶೇ 80ರಷ್ಟು ಅಂತರ್ಜಲ ಕುಸಿದಿದೆ. ಯೋಜನೆ ಜಾರಿಯಾದರೆ ಅಂತರ್ಜಲ ಹೆಚ್ಚಲಿದೆ ಎಂದು ಹೇಳಿದ್ದಾರೆ.
ತಕ್ಷಣ ಈ ಯೋಜನೆ ಜಾರಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಖಂಡರಾದ ನಾಗಪ್ಪ ಸವಡಿ, ದೇವಪ್ಪ ಕಟ್ಟಿಮನಿ, ಭೀಮರೆಡ್ಡಿ ಹಳ್ಳಿಕೇರಿ, ಈಶಪ್ಪ ಜೋಳದ, ಶರಣಪ್ಪ ಜಡಿ, ರಮೇಶ ಕರಡಿ, ವಸಂತ ಗದ್ದಿಕೇರಿ, ಬಸವರಾಜ ಉಪ್ಪಾರ, ವಸಂತ ಕರಿಗಾರ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.