ADVERTISEMENT

ಭೂಮಿಯ ಫಲವತ್ತತೆಗೆ ಸಾವಯವ ಕೃಷಿ

ರೈತರಿಗೆ ತಾಲ್ಲೂಕು ಪಂಚಾಯಿತಿ ಇಒ ಡಾ.ಜಯರಾಂ ಚವ್ಹಾಣ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:11 IST
Last Updated 10 ಆಗಸ್ಟ್ 2021, 12:11 IST
ಕುಷ್ಟಗಿ ತಾಲ್ಲೂಕು ಮೆಣೆದಾಳದಲ್ಲಿ ನಡೆದ ರೈತ ಬಂದು ಅಭಿಯಾನದಲ್ಲಿ ತಾ.ಪಂ. ಇಒ ಡಾ.ಜಯರಾಂ ಚವ್ಹಾಣ ಮಾತನಾಡಿದರು
ಕುಷ್ಟಗಿ ತಾಲ್ಲೂಕು ಮೆಣೆದಾಳದಲ್ಲಿ ನಡೆದ ರೈತ ಬಂದು ಅಭಿಯಾನದಲ್ಲಿ ತಾ.ಪಂ. ಇಒ ಡಾ.ಜಯರಾಂ ಚವ್ಹಾಣ ಮಾತನಾಡಿದರು   

ಕುಷ್ಟಗಿ: ‘ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿಗಳನ್ನು ನಿರ್ಮಿಸಿಕೊಳ್ಳುವ ಮೂಲಕ ರೈತರು ಸಾವಯವ ಮತ್ತು ಸಮೃದ್ಧ ಕೃಷಿಯತ್ತ ಆಸಕ್ತಿ ತಳೆಯಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಜಯರಾಂ ಚವ್ಹಾಣ ಹೇಳಿದರು.

ತಾಲ್ಲೂಕಿನ ಮೆಣೆದಾಳ ಗ್ರಾಮದಲ್ಲಿ ನಡೆದ ನರೇಗಾ ಯೋಜನೆಯ ‘ರೈತ ಬಂಧು ಪೌಷ್ಟಿಕ ತೋಟ ಅಭಿಯಾನ’ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ರಾಸಾಯನಿಕ ಕೃಷಿಯಲ್ಲಿ ತೊಡಗಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಮಣ್ಣಿಗೂ ಜೀವ ಇದೆ. ಅಸಂಖ್ಯಾತ, ಉಪಯುಕ್ತ ಜೀವಾಣುಗಳು ಇದ್ದುದರಿಂದಲೇ ಬೆಳೆಗಳು ಬೆಳೆಯುತ್ತವೆ. ಆದರೆ ಮಣ್ಣು ಮೂಲ ಗುಣ ಕಳೆದುಕೊಂಡರೆ ಭವಿಷ್ಯದ ದಿನಗಳಲ್ಲಿ ಯಾವುದೇ ಗೊಬ್ಬರ ಹಾಕಿದರೂ ಬೆಳೆ ಬಾರದಂಥ ಸ್ಥಿತಿ ಬರುತ್ತದೆ ಎಂಬುದನ್ನು ರೈತರು ಗಮನಿಸಬೇಕು ಎಂದರು.

ADVERTISEMENT

ಮನೆ ಹಾಗೂ ಜಮೀನಿನಲ್ಲಿರುವ ಕೃಷಿ ತ್ಯಾಜ್ಯಗಳಿಂದ ಎರೆಹುಳು ಗೊಬ್ಬರವನ್ನು ರೈತರು ಸ್ವತಃ ತಯಾರಿಸಿಕೊಳ್ಳಬಹುದಾಗಿದು. ನರೇಗಾ ಯೋಜನೆಯಲ್ಲಿ ಇದಕ್ಕೆ ಅನುದಾನ ದೊರೆಯುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 30 ತೊಟ್ಟಿಗಳ ನಿರ್ಮಾಣಕ್ಕೆ ಅವಕಾಶ ಇದೆ ಎಂದು ಹೇಳಿದರು.

ಎರೆಹುಳು ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಬಳಸಿ ಉಳಿದದ್ದನ್ನು ಬೇರೆಯವರಿಗೂ ಮಾರಾಟ ಮಾಡಬಹುದಾಗಿದೆ. ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ರಾಸಾಯನಿಕ ರಹಿತ ಕೃಷಿ, ತೋಟಗಾರಿಕೆಯಲ್ಲಿ ತೊಡಗಿದರೆ ಪೌಷ್ಟಿಕ ಅಂಶಗಳನ್ನು ಒಳಗೊಂಡ ಗುಣಮಟ್ಟದ ಹಣ್ಣು, ತರಕಾರಿ ದೊರೆಯುತ್ತವೆ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ವಿ.ವೆಂಕಟೇಶ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿ ಬಸವರಾಜ ಹಾಗೂ ಸುತ್ತಲಿನ ಗ್ರಾಮಗಳ ಅನೇಕ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.