ಕನಕಗಿರಿ: ಕಾಲೇಜಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನಿರಂತರ ನಡೆಯುವುದರಿಂದ ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅನಿಲ್ ಎಡ್ವರ್ಡ್ ತಿಳಿಸಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣಬೇಕಾದರೆ ಸ್ಪಷ್ಟವಾದ ಗುರಿ ಮತ್ತು ಕಠಿಣ ಅಭ್ಯಾಸ ಅತ್ಯಗತ್ಯವಾಗಿದೆ, ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಆದ್ದರಿಂದ ನಿರಂತರವಾದ ಅಭ್ಯಾಸ ಮತ್ತು ಉತ್ತಮವಾದ ತರಬೇತಿಯಿಂದ ಸಾಧನೆ ಸಾಧ್ಯ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯವಿದ್ದು ಸಾಧಕ ಪ್ರತಿಭೆಗಳಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.
ಕ್ರೀಡಾ ಸಂಯೋಜಕ ಪ್ರೊ. ರಕ್ಷಿತ್ ಎ. ಮಾತನಾಡಿ ಸಾಧನೆಯಲ್ಲಿ ಛಲವಿದ್ದವರಿಗೆ ಯಾವುದೂ ಅಸಾಧ್ಯವಲ್ಲ, ಕ್ರೀಡಾ ಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ ಅವೆರಡನ್ನೂ ಸಮಾನವಾಗಿ ಸ್ವೀಕರಿಸಿ ನಿರಂತರ ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ಹಿಮಾಲಯ ಪರ್ವತ ಏರಿದ ತೇನ್ ಸಿಂಗ್ ಪ್ರತಿಯೊಬ್ಬರಿಗೂ ಮಾದರಿ, ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಕ್ರೀಡಾ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡುವಂತಾಗಬೇಕು ಎಂದು ಹೇಳಿದರು.
ಪ್ರಭಾರ ಪ್ರಾಂಶುಪಾಲ ಬಜರಂಗ ಬಲಿ, ದೈಹಿಕ ಶಿಕ್ಷಣ ನಿರ್ದೇಶಕಿ ಶಾಂತವ್ವ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಆಶಿಕಾ ಎಚ್.ಸಿ, ಲಲಿತಾ ಎನ್.ಕಿನ್ನಾಳ, ಮರ್ವಿನ್ ಡಿಸೋಜ್, ವೀರೇಶ ಕೆಂಗಲ್, ಅತಿಥಿ ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಬಾಳಪ್ಪ ಸುಳೇಕಲ್, ಮಾರುತೇಶ ಎನ್, ಸೋಮಶೇಖರಪ್ಪ, ರವಿಕುಮಾರ, ದೇವೆಂದ್ರಪ್ಪ, ಬಸವರಾಜ, ಮಂಜುನಾಥ ಕೆ.ಎಸ್, ವೀರೇಶ, ಟಿ.ಪ್ರಿಯಾಂಕ ಭಾಗವಹಿಸಿದ್ದರು.
ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್, ಉದ್ದ ಜಿಗಿತ, ಗುಂಡು ಎಸೆತ, ಚೆಸ್ ಸೇರಿದಂತೆ ವಿವಿಧ ಕ್ರೀಡಾ ಕೂಟಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.