ಮೃತಪಟ್ಟ ಮಗು
ಗಂಗಾವತಿ: ಎರಡ್ಮೂರು ದಿನಗಳಿಂದ ಸುರಿದ ಸಾಧಾರಣ ಮಳೆಗೆ ಮನೆಯ ಶೀಟ್ ಮತ್ತು ಗೋಡೆ ಕುಸಿದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಹೆಬ್ಬಾಳ ಗ್ರಾಮದ ಪ್ರಶಾಂತಿ ಮೃತಪಟ್ಟ ಮಗು. ಘಟನೆಯಲ್ಲಿ ಬಾಲಕಿಯ ತಾಯಿ ಹನುಮಂತಿ, ಕುಟುಂಬ ಸದಸ್ಯರಾದ ದುರ್ಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಎನ್ನುವವರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಗಂಗಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಒಂದು ವಾರದಿಂದ ಗಂಗಾವತಿ ತಾಲ್ಲೂಕಿನಲ್ಲಿ ಧಾರಕಾರ ಮಳೆ ಆಗಿದೆ. ಈಚೆಗೆ ಹನುಮಂತಿ ಎನ್ನುವವರು ಮಗಳೊಂದಿಗೆ ಕುಟುಂಬಸ್ಥರನ್ನು ಭೇಟಿಯಾಗಲು ತವರು ಮನೆಗೆ ಬಂದಿದ್ದಾಗ ಈ ಅವಘಡ ನಡೆದಿದೆ.
ಬುಧವಾರ ತಡರಾತ್ರಿ ಮನೆಯ ಚಾವಣಿ ಹಾಗೂ ಗೋಡೆಯ ಕಲ್ಲುಗಳು ಕುಟುಂಬಸ್ಥರ ಮೇಲೆ ಬಿದ್ದಿದ್ದು, ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಗಂಗಾವತಿ ತಹಶೀಲ್ದಾರ್ ಯು.ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.