ತಾವರಗೇರಾ (ಕೊಪ್ಪಳ ಜಿಲ್ಲೆ): ಅಪಘಾತದಲ್ಲಿ ಎಡಗಾಲು ಮುರಿದುಕೊಂಡಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಂದ್ರಶೇಖರ ಮೆಣದಾಳ ಗುರುವಾರ ತಾವರಗೇರಾ ಕೇಂದ್ರದಲ್ಲಿ ಹಾಸಿಗೆ ಮೇಲೆ ಕೂತುಕೊಂಡೆ ಕನ್ನಡ ವಿಷಯ ಪರೀಕ್ಷೆ ಬರೆದರು.
ತಾಲ್ಲೂಕಿನ ನಂದಾಪುರದ ಚಂದ್ರಶೇಖರಗೆ ಕಾಲು ಮಡಚಲು ಆಗುವುದಿಲ್ಲ. ಹೀಗಾಗಿ ಟಂಟಂ ವಾಹನದಲ್ಲಿ ಹಾಸಿಗೆ ಮತ್ತು ದಿಂಬು ಸಮೇತ ಕಾಲು ಚಾಚಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದರು. ಸಹಾಯಕರ ನೆರವಿನೊಂದಿಗೆ ಪರೀಕ್ಷಾ ಕೊಠಡಿಗೆ ತೆರಳಿ, ಅಲ್ಲಿ ಹಾಸಿಗೆ ಮೇಲೆ ಕೂತು ಪರೀಕ್ಷೆ ಬರೆದರು.
‘ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಮಹತ್ವದ ಘಟ್ಟ. ಅನಿರೀಕ್ಷಿತವಾಗಿ ಅಪಘಾತವಾಗಿದೆ. ಇದೊಂದು ಕಾರಣಕ್ಕೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವುದು ಇಷ್ಟವಿರಲಿಲ್ಲ’ ಎಂದು ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.
ಪರೀಕ್ಷಾ ಕೇಂದ್ರದವರು ವಿದ್ಯಾರ್ಥಿಗೆ ನೆರವಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.