ಕುಕನೂರು: ಜನಪದ ಸಾಹಿತ್ಯವು ಜನರಲ್ಲಿ ಸಹನೆ ಮತ್ತು ಸೌಹಾರ್ದತೆ ಬೆಳೆಸುತ್ತದೆ ಎಂದು ಮುಖಂಡ ಕಳಕನಗೌಡ ಕಲ್ಲೂರ ಹೇಳಿದರು.
ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಆಯೋಜಿಸಿರುವ ಇಟಗಿ ಉತ್ಸವದಲ್ಲಿ ಬುಧವಾರ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗವು ಶ್ರೀಮಂತ ಜನಪದ ಸಾಹಿತ್ಯ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ. ಆದರೆ, ಜನಪದ ವರ್ಷದಿಂದ ವರ್ಷಕ್ಕೆ ನಮ್ಮಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಜನಪದ ಸಾಹಿತ್ಯ ಎಲ್ಲ ಕಲಾ ಪ್ರಕಾರಗಳಿಗೂ ಮೂಲವಾಗಿದ್ದರೂ, ಇತ್ತೀಚೆಗೆ ಜನರಿಂದ ಅದು ಮರೆಯಾಗುತ್ತಿದೆ. ಜನಪದ ಅಳಿದರೆ ನಮ್ಮ ಸಂಸ್ಕೃತಿ, ಕಲೆಗೆ ಧಕ್ಕೆವುಂಟಾಗಲಿದೆ ಎಂದರು.
ನಾಗರಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಮಾತನಾಡಿ, ಜನಪದವು ಜನರ ಜೀವಾಳ. ಗ್ರಾಮೀಣ ಪ್ರದೇಶದ ಸಂಸ್ಕೃತಿ ಪರಂಪರೆ ಮತ್ತು ಸೊಗಡು ನಾಶವಾಗಿ ಮುಂದಿನ ಪೀಳಿಗೆಗೆ ಜನಪದ ಸಾಹಿತ್ಯ ತಿಳಿಸಲು ಕಷ್ಟವಾಗಲಿದೆ. ಆದ್ದರಿಂದ ಇದನ್ನು ಉಳಿಸಲು ಯುವಶಕ್ತಿ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಶರಣಯ್ಯ ಇಟಗಿ, ಉತ್ಸವದ ಸಂಚಾಲಕ ಮಹೇಶಬಾಬು ಸುರ್ವೆ, ಸಾಹಿತಿ ಫಕಿರಪ್ಪ ವಜ್ರಬಂಡಿ, ಸಾದಿಕ್ ಅಲಿ, ಎಂ.ಬಿ ಅಳವುಂಡಿ, ಅನ್ನಪೂರ್ಣಮ್ಮ ಮನ್ನಾಪುರ, ರುದ್ರಪ್ಪ ಬಂಡಾರಿ, ಮಂಜುನಾಥ ಪ್ರಸಾದ್, ಬಸವರಾಜ ಕೊನಾರಿ, ಬಿ.ಎಂ ಹಳ್ಳಿ, ಮಂಜುನಾಥ ಅಂಗಡಿ, ಕರಬಸಯ್ಯ ಬಿನ್ನಾಳ, ವಿರುಪಾಕ್ಷಪ್ಪ ಪೊಲೀಸ್ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.