ಗಂಗಾವತಿ: ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಜಂಗಮ ಸಮುದಾಯ ಒಗ್ಗಟ್ಟಾಗಿ, ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ ಎಂದು ಡಾ.ಕೊಟ್ಟೂರು ಸ್ವಾಮೀಜಿ ತಿಳಿಸಿದರು.
ಇಲ್ಲಿನ ಜಯನಗರ ಗಂಗಾಧರೇಶ್ವರ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಜಂಗಮ ಸಮಾಜದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜಂಗಮ ಸಮಾಜ ತುಂಬಾ ಹಿಂದುಳಿದಿದೆ. ಸಮಾಜಕ್ಕೆ ಮೀಸಲಾತಿ ನೀಡುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಸಮಾಜದವರು ಎಚ್ಚೆತ್ತು, ಕೂಡಲೆ ಸಮಾವೇಶ ಆಯೋಜಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದು ಕೇವಲ ಕಾವಿಧಾರಿಗಳಿಂದ ಮಾತ್ರ ಸಾಧ್ಯವಲ್ಲ. ಜಂಗಮ ಸಮಾಜದ ಜನಪ್ರತಿನಿಧಿಗಳು ಸರ್ಕಾರ ಆಡಳಿತದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಜಂಗಮ ಸಮಾಜ ಅಭಿವೃದ್ದಿಯ ಕುರಿತ ಸಭೆಗಳನ್ನು ಆಯೋಜಿಸಿ, ಸಮುದಾಯ ಬಲಪಡಿಸಬೇಕು. ಹಾಗೆಯೆ ಕಾನೂನಾತ್ಮಕ ವಾಗಿ ಹೋರಾಟ ನಡೆಸಿ, ಜಂಗಮ ಸಮಾಜದವರಿಗೆ ಬೇಡ ಜಂಗಮ ಪ್ರಮಾಣ ಪತ್ರವನ್ನು ದೊರಕಿಸಿಕೊಡಬೇಕು ಎಂದರು.
ಈ ಸಭೆಯಲ್ಲಿ ಸಮಾಜದ ಅಭಿವೃದ್ದಿ, ಹಕ್ಕುಗಳು ಪಡೆಯುವ ವಿಧಾನ, ಸರ್ಕಾರದ ಮೇಲೆ ಒತ್ತಡ ಹಾಕುವ ಬಗೆ ಕುರಿತು ಚರ್ಚೆ ಮಾಡಲಾಯಿತು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ, ಚಳ್ಳಗೇರಿ ವೀರಸಂಗಮೇಶ್ವರ ಸ್ವಾಮೀಜಿ, ತಲೇಖಾನ ಹಿರೇಮಠದ ವೀರಭದ್ರಯ್ಯ ಸ್ವಾಮಿ, ಸುಳೆಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಮುಖಂಡ ಚನ್ನಬಸಯ್ಯಸ್ವಾಮಿ ಹಿರೇಮಠ, ಜಿ.ಪಂ. ಮಾಜಿ ಸದಸ್ಯ ಸಿದ್ಧರಾಮಸ್ವಾಮಿ, ಬಸವರಾಜ ಮಳಿಮಠ, ಶಶಿಧರಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಸಂಶಿಮಠ, ಶಂಕ್ರಯ್ಯಸ್ವಾಮಿ, ಹುಚ್ಚಯ್ಯಸ್ವಾಮಿ, ಎಸ್.ಬಿ.ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.