ಕೊಪ್ಪಳ: ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜೊತೆಗೆ ಕೃಷಿ, ಸಾಂಸ್ಕೃತಿಕ, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಘ ರಚಿಸಿ, ಅಭಿವೃದ್ಧಿಗಾಗಿ ಅನುದಾನವನ್ನು ನೀಡಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
ಅಮೃತ ಯೋಜನೆಯಲ್ಲಿ ಗ್ರಾಮ ಪಂಚಾಯತಿ, ವಸತಿ ಯೋಜನೆ, ರೈತ ಉತ್ಪಾದಕ ಸಂಸ್ಥೆಗಳು, ನಿರ್ಮಲ ನಗರ, ಶಾಲಾ ಸೌಲಭ್ಯ ಯೋಜನೆ, ಅಂಗನವಾಡಿ ಕೇಂದ್ರಗಳು, ಸ್ವಸಹಾಯ ಕಿರು ಉದ್ದಿಮೆಗಳು, ಅಮೃತ ಸಹಾಯ ಅಭಿವೃದ್ಧಿ ಯೋಜನೆ, ಆರೋಗ್ಯ ಮೂಲ ಸೌಕರ್ಯ ಉನ್ನತೀಕರಣ ಯೋಜನೆ, ಕೌಶಲ ತರಬೇತಿ ಯೋಜನೆ, ಕ್ರೀಡಾ ದತ್ತು ಯೋಜನೆ, ನಗರೋತ್ಥಾನ ಯೋಜನೆ, 75 ನವೋದ್ಯಮಗಳಿಗೆ ಉತ್ತೇಜನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
21-22ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜಿಲ್ಲೆಗೆ ಮೈಕ್ರೋ ವಲಯದಲ್ಲಿ 100 ಕೋಟಿ ಹಾಗೂ ಮ್ಯಾಕ್ರೋ ವಲಯದಲ್ಲಿ 42.86 ಕೋಟಿ ಹೀಗೆ ಒಟ್ಟು 142.86 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಸದರಿ ಅನುದಾನಕ್ಕೆ ಈಗಾಗಲೇ ಕ್ರಿಯಾಯೋಜನೆ ರೂಪಿಸಿ, ಅನುಮೋದನೆಗಾಗಿ ಮಂಡಳಿಗೆ ಸಲ್ಲಿಸಲಾಗಿದೆ. ಈ ಪೈಕಿ ಮ್ಯಾಕ್ರೋ ಅನುದಾನದಲ್ಲಿ 3167 ಕೋಟಿ ಅನುದಾನಕ್ಕೆ ಕೋವಿಡ್-19 ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮಂಡಳಿಯಿಂದ ಮಂಜೂರಾತಿ ನೀಡಲಾಗಿರುತ್ತದೆ ಎಂದರು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ಮತ್ತು ಕಾನೂನು ನೆರವು ಹಾಗೂ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸುವ ಸಂಬಂಧ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ, ‘ಸಖಿ’ ಒನ್ ಸ್ಟಾಫ್ ಸೆಂಟರ್ ಯೋಜನೆ ಪ್ರಾರಂಭಿಸಲಾಗಿರುತ್ತದೆ. ಇಲ್ಲಿಯವರೆಗೆ 42 ಪ್ರಕರಣ ದಾಖಲಾಗಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.