
ಕನಕಗಿರಿ: ‘ದೇಶದ ಸಂವಿಧಾನದ ಪ್ರತಿಫಲವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ’ ಎಂದು ಚಿಂತಕ ಲಿಂಗಣ್ಣ ಜಂಗಮರಹಳ್ಳಿ ತಿಳಿಸಿದರು.
ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗದ ಸಮಾಜಕ್ಕೆ ಸೇರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ರಂಗ ಹಾಗೂ ಆಡಳಿತದ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಸಂವಿಧಾನದ ಕೊಡುಗೆ ವಿನಾಃ ಯಾವುದೇ ಧರ್ಮ ಗ್ರಂಥಗಳಿಂದ ಅಲ್ಲ’ ಎಂದು ತಿಳಿಸಿದರು.
‘ಧರ್ಮದ ಹೆಸರಿನಲ್ಲಿ ದೇಶ ಸಂರಕ್ಷಣೆ ಮಾಡುತ್ತಿರುವವರು ದೇಶ ಭಕ್ತರಲ್ಲ, ಸಂವಿಧಾನವನ್ನು ನಂಬಿರುವವರು ನಿಜವಾದ ರಾಷ್ಟ್ರಭಕ್ತರು’ ಎಂದು ಪ್ರತಿಪಾದಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ ಮಾತನಾಡಿ, ‘ದೇಶ ಸಂವಿಧಾನದ ಆಶಯ ಬಲಿಷ್ಠವಾಗಿದೆ, ವಿವಿಧತೆಯಲ್ಲಿ ಏಕತೆ ಸಾಧಿಸುವಲ್ಲಿ ಸಂವಿಧಾನ ಪ್ರಮುಖವಾಗಿದೆ’ ಎಂದರು.
ತಹಶೀಲ್ದಾರ್ ವಿಶ್ವನಾಥ ಮುರುಡಿ, ವಸತಿನಿಲಯ ಮೇಲ್ವಿಚಾರಕ ಶರಣಪ್ಪ ನಾಯಕ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಇಂದಿರಾನಗರ, ಮಹರ್ಷಿ ವಾಲ್ಮೀಕಿ ವೃತ್ತ, ಎಪಿಎಂಸಿ ಮಳಿಗೆ ರಸ್ತೆ ಮೂಲಕ ಕನಕಾಚಲಪತಿ ದೇವಸ್ಥಾನದ ವೇದಿಕೆ ವರೆಗೆ ಜಾಥ ಕಾರ್ಯಕ್ರಮ ನಡೆಯಿತು. ತಾಷ ಮೇಳ, ಡೊಳ್ಳು ಕುಣಿತ, ಸಂವಿಧಾನದ ಪೀಠಿಕೆ ಭಾವಚಿತ್ರ ಸಂವಿಧಾನದ ಪೀಠಿಕೆಯ ಜಾಥಕ್ಕೆ ಮೆರಗು ನೀಡಿತು.
ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಪ್ರಗತಿಪರ ಸಂಘಟನೆಯ ಪ್ರಮುಖರು ತಾಷಮೇಳಕ್ಕೆ ಕುಣಿದು ಕುಪ್ಪಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತ ಹುಸೇನ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಕೆ.ರಾಜಶೇಖರ, ಪಿಐ ಎಂ.ಡಿ. ಫೈಜುಲ್ಲಾ, ಶಿಕ್ಷಣ ಸಂಯೋಜಕ ಶ್ರೀಕಾಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ಬಿಜೆಪಿ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಟ್ಟಣ ಪಂಚಾಯಿತಿಯ ಕಂದಾಯ ನಿರೀಕ್ಷಕ ಕನಕಪ್ಪ ನಾಯಕ,
ಪಟ್ಟಣ ಪಂಚಾಯಿತಿ ಸದಸ್ಯ ಶೇಷಪ್ಪ ಪೂಜಾರ, ಹನುಮಂತಪ್ಪ ಬಸರಿಗಿಡದ, ಸುರೇಶ ಗುಗ್ಗಳಶೆಟ್ರ, ರಾಜಾಸಾಬ, ಶಾಂತಪ್ಪ ಬಸರಿಗಿಡದ, ಎಸ್.ಸಿ , ಎಸ್.ಟಿ ( ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನಾಗೇಶ ಬಡಿಗೇರ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹುಸೇನಬೀ, ರವಿ ಭಜಂತ್ರಿ, ಪಾಮಣ್ಣ ಅರಳಿಗನೂರು, ಕನಕಪ್ಪ ಮ್ಯಾಗಡೆ, ನಿಂಗಪ್ಪ ಪೂಜಾರ, ಚಿದಾನಂದ ಭಜಂತ್ರಿ, ನೀಲಕಂಠ ಬಡಿಗೇರ, ವೆಂಕೋಬ ಭೋವಿ, ಸುರೇಶ ಧರ್ಮಣ್ಣ, ಉಮೇಶ ಮ್ಯಾಗಡೆ, ವೆಂಕಟೇಶ ಪೂಜಾರ, ರಮೇಶ ಬಡಿಗೇರ ಇದ್ದರು.
ಕನಕಾಚಲ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.