
ಕನಕಗಿರಿ: ‘ಒತ್ತುವರಿಯಾಗಿರುವ ಪಟ್ಟಣದ ರಾಜಬೀದಿಯ ಜಾಗ ತೆರವುಗೊಳಿಸಬೇಕು, ಎಪಿಎಂಸಿಯ ಹೊರಗೋಡೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ ಪೂಜಾರ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಹರೀಶ ಪೂಜಾರ, ‘ರಸ್ತೆ ವಿಸ್ತರಣೆ ಹಾಗೂ ಸುಂದರ ನಗರ ಮಾಡಬೇಕೆಂಬ ನೆಪದಲ್ಲಿ ಈ ಹಿಂದಿನ ಪಟ್ಟಣ ಪಂಚಾಯಿತಿ ಅಧಿಕಾರಿ ಎಪಿಎಂಸಿಗೆ ಹೊಂದಿಕೊಂಡಿದ್ದ ಹತ್ತಾರು ಗೂಡಂಗಡಿಗಳನ್ನು ತೆರವುಗೊಳಿಸಿ ಬಡ ಕುಟುಂಬಗಳನ್ನು ಬೀದಿ ಪಾಲು ಮಾಡಿದ್ದಾರೆ’ ಎಂದು ದೂರಿದರು.
‘ಎಪಿಎಂಸಿಗೆ ಸೇರಿದ ಹೊರಗೋಡೆಯನ್ನು ಧ್ವಂಸ ಮಾಡಿ ಪ್ರಭಾವಿ ದಲ್ಲಾಳಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಜಾಗದಲ್ಲಿ ಮತ್ತೆ ಹೊರಗೋಡೆ ನಿರ್ಮಾಣ ಮಾಡಬೇಕು.ಶ್ರೀಮಂತರ ಮಳಿಗೆಗಳನ್ನು ಮುಖ್ಯ ರಸ್ತೆಗೆ ತರುವ ಸಲುವಾಗಿ ಅಧಿಕಾರಿಗಳು ದಲ್ಲಾಳಿ ವರ್ತಕರ ಜತೆಗೆ ಶಾಮೀಲಾಗಿ ಹೊರಗೋಡೆ ಒಡೆದು ಹಾಕಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈವರೆಗೆ ಈ ಮುಖ್ಯಾಧಿಕಾರಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರಿದರು.
ಕಾನೂನು ಪ್ರಕಾರ ದಲ್ಲಾಳಿ ಮಳಿಗೆಗಳು ಗಂಗಾವತಿ- ಲಿಂಗಸೂರು ರಸ್ತೆಗೆ ಮುಖಮಾಡಿ ವಹಿವಾಟು ನಡೆಸುವಂತಿಲ್ಲ ಇಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಪೂಜಾರ ವಿವರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಬಡಿಗೇರ, ಪ್ರಮುಖರಾದ ಬಸವರಾಜ ಕೋರಿ ಅಂಬ್ರೇಶ ಪಟ್ಟಣಶೆಟ್ರ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.