
ಕನಕಗಿರಿ: ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಡಿಮೆ ಕೂಲಿ ನೀಡಲಾಗಿದೆ ಎಂದು ಆರೋಪಿಸಿ ಹಿರೇಮಾದಿನಾಳ ಗ್ರಾಮದ ಕಾರ್ಮಿಕರು ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮುಖಂಡ ಹುಲಗೇಶ ನಾಯಕ ಮಾತನಾಡಿ, ‘ಚಿಕ್ಕ ಮಾದಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾದಿನಾಳ ಗ್ರಾಮದ ನೂರಾರು ಕೂಲಿಕಾರರು ರಾಮದುರ್ಗಾ ಗ್ರಾಮದ ಕೆರೆ ಹೂಳು ಎತ್ತುವ ಕೆಲಸವನ್ನು 14 ದಿನಗಳ ಕಾಲ ಮಾಡಿದ್ದು ಕೂಲಿಕಾರರಿಗೆ ತಲಾ ₹370 ಬದಲಾಗಿ ₹310 ಪಾವತಿ ಮಾಡಿದ್ದಾರೆ. ಇದರಿಂದ ಕೂಲಿಕಾರರಿಗೆ ಅನ್ಯಾಯವಾಗಿದೆ’ ಎಂದು ದೂರಿದರು.
ನರೇಗಾ ಯೋಜನೆಯಲ್ಲಿ ತಲಾ ಒಬ್ಬ ಕೂಲಿಕಾರರಿಗೆ ದಿನಕ್ಕೆ ₹370 ಕೂಲಿ ನೀಡಬೇಕು, 7 ದಿನದ ಕೂಲಿ ಹಣ ಪಾವತಿ ಮಾಡಲಾಗಿದ್ದು ಅದರಲ್ಲಿ ₹60 ಕಡಿಮೆ ಹಾಕಲಾಗಿದೆ. ₹310 ಕೂಲಿ ಹಣದಲ್ಲಿಯೇ ನಾವು ಆಟೋ ಬಾಡಿಗೆ ನೀಡಬೇಕಾಗಿದೆ’ ಎಂದು ಅಳಲು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ಬ ವಡ್ರಕಲ್ ಮಾತನಾಡಿ, ‘ತಾಂತ್ರಿಕ ದೋಷದಿಂದ ಹಣ ಪಾವತಿ ಮಾಡುವಲ್ಲಿ ಸಮಸ್ಯೆಯಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ನಂತರ ಕೂಲಿಕಾರರು ಪ್ರತಿಭಟನೆ ಹಿಂಪಡೆದರು.
ನರೇಗಾ ಕೂಲಿಕಾರ ಹನುಮಂತಪ್ಪ ಗೊಲ್ಲರ, ಮಾದಿನಾಳಪ್ಪ ಜಿನ್ನಾಪುರ, ಹೊಳೆಯಪ್ಪ ಹೊಸುರು, ಲೋಕಪ್ಪ ಗೌಡರ, ಉಮೇಶ ಬಡಿಗೇರ, ರಾಜಾಸಾಬಕೊತ್ವಾಲ, ಹನುಮಮ್ಮ ಭಾವಿಕಟ್ಟಿ, ಹನುಮಮ್ಮ ಗೊಲ್ಲರ, ಹನುಮಮ್ಮ ಹರಿಜನ ರೇಣುಕಮ್ಮ, ಆಶಾಬೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.