ಹನುಮಸಾಗರ: ಗ್ರಾಮದ ಮುಖ್ಯರಸ್ತೆ ಬದಿಯಲ್ಲಿನ ಗಿಡಮರಗಳಿಗೆ ತತ್ರಾಣಿಗಳನ್ನು ಕಟ್ಟಿ ಪಕ್ಷಿಗಳಿಗೆ ನೀರುಣಿಸಲು ಕಾಯುತ್ತ ಕುಳಿತಿದ್ದ ಇಲ್ಲಿನ ಪಕ್ಷಿವೃಕ್ಷ ಬಳಗಕ್ಕೆ ಜನತಾ ಕರ್ಫ್ಯೂಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿರುವ ಕಾರಣವಾಗಿ ಗಿಡಗಳಿಗೆ ತತ್ರಾಣಿ ಕಟ್ಟುವ ಈ ಕೆಲಸ ನಿಂತಿತ್ತು. ಈ ದಿನ ನಮ್ಮ ಕೆಲಸ ಪೂರ್ಣಗೊಂಡಿದ್ದು ಮುಖ್ಯ ರಸ್ತೆಯ ಎಲ್ಲ ಗಿಡಮರಗಳಿಗೂ ಬಳಗದ ಸದಸ್ಯರು ಪ್ರತ್ಯೇಕವಾಗಿ ಹೋಗಿ ತತ್ರಾಣಿಗಳನ್ನು ಕಟ್ಟಿ ನೀರು ಹಾಕಿ ಬಂದಿದ್ದೇವೆ ಎಂದು ಬಳಗದ ಮುಖ್ಯಸ್ಥ ರಾಘವೇಂದ್ರ ಈಳಗೇರ ಹೇಳಿದರು.
ಈಗಾಗಲೇ ಈ ಬಳಗದ ಸದಸ್ಯರು ಒಂದು ತಿಂಗಳಿನಿಂದ ಬೆಟ್ಟದ ವಿವಿಧ ಭಾಗಗಳಲ್ಲಿ ಈ ಕಾರ್ಯ ನಡೆಸಿದ್ದಾರೆ. ವಿವಿಧ ಭಾಗಗಳಲ್ಲಿನ ಗಿಡಗಳಲ್ಲಿ ನೇತುಹಾಕಿರುವ ಮಡಿಕೆ, ತತ್ರಾಣಿ, ಪ್ಲಾಸ್ಟಿಕ್ ವಸ್ತುಗಳು ಪಕ್ಷಿಗಳಿಗೆ ನೀರುಣಿಸುತ್ತಿವೆ. ನಮ್ಮ ಬಳಗ ಸೇರಿಕೊಂಡು ಪಕ್ಷಿಗಳಿಗೆ ನೀರುಣಿಸುವ ಕಾರ್ಯದ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು ಸಂತಸವಾಗಿದೆ ಎಂದು ರಾಘವೇಂದ್ರ ಹೇಳಿದರು. ಬಸವರಾಜ ಸಜ್ಜನ್, ವಿಶ್ವನಾಥ ಇಳಗೇರ, ಸಾಗರ ಕಾಟ್ವಾ, ಪ್ರೀತಮ್ ಬಸ್ವಾ, ಹುಸೇನ ಅಮಿನಗಡ, ಬಸವರಾಜ ಹೂಗಾರ, ವಿಶಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.