ತಾವರಗೇರಾ: ಪಟ್ಟಣದಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಕೆಲ ಮನೆ, ಬಟ್ಟೆ ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿದ್ದವು.
ಕರಿವೀರಣ್ಣ ದೇವಸ್ಥಾನದಲ್ಲಿ ಅಪಾರ ಪ್ರಮಾಣದ ನೀರು ನುಗ್ಗಿದೆ. ಬಜಾರ ಮುಖ್ಯ ರಸ್ತೆಯಲ್ಲಿ ಹೆಚ್ಚಿ ನೀರು ಸಂಗ್ರಹವಾದ ಪರಿಣಾಮ ಅಲ್ಲಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಿದ್ದವು. ರಸ್ತೆ ಪಕ್ಕದ ದ್ಯಾಮಣ್ನ ಬಡಿಗೇರ, ಅಮರೇಶ ಕಂಬಾರ, ಪಂಪಣ್ಣ ಪತ್ತಾರ ಅವರ ಮನೆಗಳಿಗೆ ನೀರು ನುಗ್ಗಿತ್ತು. ಕುಟುಂಬಸ್ಥರು ನೀರು ಹೊರಹಾಕಲು ಪರದಾಡಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ನೀರು ಹೊರ ಹೋಗಲು ಅವಕಾಶವಿಲ್ಲದ ಕಾರಣ ಮುಖ್ಯ ರಸ್ತೆಯಲ್ಲಿ ಅಪಾರ ನೀರು ನಿಂತು ಓಡಾಟಕ್ಕೆ ತೊಂದರೆಯಾಯಿತು.
‘ನೀರು ಹೊರ ಹೋಗುವಂತೆ ಯೋಜನೆ ರೂಪಿಸಬೇಕು. ಸದ್ಯ ಪಟ್ಟಣದ ಪಾತಾಳ ಲಿಂಗೇಶ್ವರ ದೇವಸ್ಥಾನದಿಂದ ಮುದಗಲ್ ರಸ್ತೆವರೆಗೆ ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದ್ದು ನೀರು ಹೋಗಲು ಸಾಧ್ಯಗುತ್ತಿಲ್ಲ. ಗುತ್ತೆದಾರರು ಆದಷ್ಟು ಬೇಗನೆ ಸಮರ್ಪಕ, ಗುಣಮಟ್ಟದ ರಸ್ತೆ, ಚರಂಡಿ ನಿರ್ಮಿಸಬೇಕಿದೆ’ ಎಂದು ಸಾರ್ವಜನಿಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.