ಕುಕನೂರು: ‘ಸಾಂಸ್ಕೃತಿಕ ಶ್ರೀಮಂತ ಪರಿಸರ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತದೆ. ಸಾಹಿತ್ಯ ಮನುಷ್ಯನಿಗೆ ಅನುಭವವನ್ನು ಒದಗಿಸುವ ಮಾಧ್ಯಮ’ ಎಂದು ಕವಿ ಸಮ್ಮೇಳನದ ಅಧ್ಯಕ್ಷ ಶಿವರಾಜ ಗುರಿಕಾರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ನಾಗರಿಕ ವೇದಿಕೆ ವತಿಯಿಂದ ನಡೆದ ಉತ್ಸವದಲ್ಲಿ ಭಾನುವಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮನುಷ್ಯನ ಆಶಯಗಳಿಗೆ ಸ್ಪಂದಿಸುವ ಬರವಣಿಗೆ ಕಲ್ಪನೆ ಮತ್ತು ಕನಸುಗಳಿಂದ ಬದುಕಿನ ಹೊಸ ಸಾಧ್ಯತೆ ಅನಾವರಣಗೊಳ್ಳುವುದು ಎಂದರು.
ಹಿರಿಯ ಸಾಹಿತಿ ವೀರಣ್ಣ ವಾಲಿ ಮಾತನಾಡಿ,‘ಪ್ರತಿ ಮನುಷ್ಯ ಇತರೆಲ್ಲ ಮಾದರಿಗಳಿಗಿಂತಲೂ ಕವಿತೆಗೆ, ಹಾಡಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾನೆ. ಮಾತಿನಲ್ಲಿ ಹೇಳಲು ಅಸಾಧ್ಯವಾದುದ್ದನ್ನು ಕವಿತೆಯ ಮೂಲಕ ಹೊರಹಾಕಲು ಸಾಧ್ಯ. ಇದು ಕವಿತೆಗಿರುವ ಶಕ್ತಿ ಮತ್ತು ಆಕರ್ಷಿಸುವ ಗುಣ. ಅನಿರ್ವಚನೀಯವಾದ ಕವಿತೆ ಮನುಷ್ಯ ಜೀವನದ ಅತ್ಯುತ್ತಮ ಸಂಗಾತಿ ಮತ್ತು ನೊಂದ ಹೃದಯಕ್ಕೆ ಸಮಾಧಾನವನ್ನು ನೀಡುತ್ತದೆ ಎಂದರು.
ಸಾಹಿತಿ ಉಪನ್ಯಾಸಕ ಹನುಮಂತಪ್ಪ ಅಂಡಗಿ ಮಾತನಾಡಿದರು.
ಮೈಲಾರಪ್ಪ ಉಂಕಿ, ಎ.ಪಿ ಅಂಗಡಿ, ವಿಮಲಾ ಇನಾಮದಾರ, ಸುನಿಲ, ನಿಂಗಮ್ಮ ಪಟ್ಟಣಶೆಟ್ಟಿ, ಶಾಂತಪ್ಪ ಪಟ್ಟಣಶೆಟ್ಟಿ, ಗವಿಶಿದ್ದಪ್ಪ ಕೊನಸಾಗರ, ಬಿ. ಆರ್ ಕಲ್ಮಠ, ಗವಿಶಿದ್ದಪ್ಪ ಬಾರಕೇರ, ಎಸ್. ಎಸ್ ಮುದ್ಲಾಪುರ, ಅನ್ನಪುರ್ಣ ಮನ್ನಾಪುರ, ಶ್ರೀಕಾಂತ ಪೂಜಾರ, ಶರಣಪ್ಪ ದಾನಕೈ ಹೀಗೆ 30 ಕ್ಕೂ ಹೆಚ್ಚು ಕವಿಗಳು ಗೋಷ್ಠಿಯಲ್ಲಿ ಭಾಗವಹಿದ್ದರು.
ಕವಿಗಳಿಗೆ ರುಕ್ಮಣೀಬಾಯಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಾಗರಿಕ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ, ಎಂ.ಬಿ ಅಳವುಂಡಿ, ಶ. ಶರಣಪ್ಪ ಪಾಟೀಲ, ತಾಲ್ಲೂಕು ಅಧ್ಯಕ್ಷ ಮಂಜುನಾಥ ಅಂಗಡಿ, ವಾಯ್. ಬಿ ಜುಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.