ಕೊಪ್ಪಳ:ಪೇಂಟರ್ ವೃತ್ತಿಯಲ್ಲಿ ತೊಡ ಗಿಸಿಕೊಂಡವರು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ್ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪೆಂಟರ್ ಕಾರ್ಮಿಕರ ಸಂಘ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಿಲ್ಲಾ ಘಟಕ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪೇಂಟರ್ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಿ ಮಾತನಾಡಿದರು.
ಕಾರ್ಮಿಕರು ಸುರಕ್ಷಾ ಕಿಟ್ ಬಳಸಿಕೊಂಡು ಕೆಲಸ ಮಾಡಬೇಕು. ಹಗ್ಗ ಮತ್ತು ಇನ್ನಿತರೆ ರಕ್ಷಣ ಕವಚಗಳನ್ನು ಕಟ್ಟಿಕೊಂಡು ಕಟ್ಟಡಗಳ ಮೇಲೆ ಹತ್ತಿ ಬಣ್ಣ ಹಚ್ಚಬೇಕು. ಬಣ್ಣಗಳಲ್ಲಿ ರಾಸಾಯನಿಕ ಇರುವುದರಿಂದ ಕಣ್ಣಿನ ರಕ್ಷಣೆ ಹಾಗೂ ಉಸಿರಾಟದ ತೊಂದರೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಂತೆ ಪೇಂಟರ್ ಕಾರ್ಮಿಕರಿಗೂ ಮಂಡಳಿಯಲ್ಲಿ ನೋಂದಣಿಯಾದರೆ ಮದುವೆ ಸಹಾಯ ಧನ, ಮಕ್ಕಳ ಶೈಕ್ಷಣಿಕ ಸಹಾಯ ಧನ. ಪಿಂಚಣಿ ಸೌಲಭ್ಯ. ವೈದ್ಯಕೀಯ ಸಹಾಯ ಧನ. ಅಪಘಾತ ಪರಿಹಾರ. ಹೆರಿಗೆ ಸೌಲಭ್ಯ. ಅಂತ್ಯಕ್ರಿಯೆ ವೆಚ್ಚ ಮುಂತಾದ ಸೌಲಭ್ಯಗಳು ನಿಗದಿತ ಅವಧಿಯಲ್ಲಿ ಅರ್ಜಿ ಹಾಕಿ ಪಡೆಯಬಹುದು ಎಂದರು.
ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಿ. ಚಿಕೇನಕೊಪ್ಪ ಹಾಗೂ ನಗರಸಭೆ ಮಾಜಿ ಸದಸ್ಯ ಗವಿಸಿದ್ದಪ್ಪ ಚಿನ್ನೂರು ಮಾತನಾಡಿದರು.
ಸಂಘದ ಜಿಲ್ಲಾ ಸಂಚಾಲಕದ ಎಸ್.ಎ.ಗಫಾರ್, ಇಲಾಖೆ ನಿರ್ದೇಶಕ ಬಸವರಾಜ ಹಿರೇಗೌಡ್ರು ಮಾತನಾಡಿದರು. ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಪೇಂಟರ್ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ್ ಮಂಡ್ಯ. ಆಸಿಫ್ ಕಿಲ್ಲೇದಾರ್. ಶರಣಪ್ಪ ಜವಳಗೇರಾ ಇದ್ದರು. ಸೈಯ್ಯದ್ ನೂರುಲ್ಲಾ ಖಾದ್ರಿ ಸ್ವಾಗತಿಸಿದರು. ಇಕ್ಬಾಲ್ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.