ಕೊಪ್ಪಳ: ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆ ಜನಿಸಿದ ಶಿಶುವನ್ನು ಹೆಣ್ಣು ಎಂದಿದ್ದ ವೈದ್ಯರು, ಮೃತಪಟ್ಟ ಬಳಿಕ ಪೋಷಕರಿಗೆ ಗಂಡು ಶಿಶುವಿನ ಮೃತದೇಹ ನೀಡಿದ್ದಾರೆ.
ಹಗರಿಬೊಮ್ಮನಹಳ್ಳಿಯ ಗೌರಿ ಎಂಬುವರಿಗೆ ಸೆ. 25ರಂದು ಹೆರಿಗೆಯಾಗಿತ್ತು. ಗರ್ಭಿಣಿಯಾಗಿ ಏಳು ತಿಂಗಳಿಗೇ ಮಗು ಜನಿಸಿದ್ದರಿಂದ ಆಸ್ಪತ್ರೆ ಸಿಬ್ಬಂದಿ ವಿಶೇಷ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು.
ಮಗು ಜನಿಸಿದ ದಿನದಿಂದಲೂ ಅಲ್ಲಿನ ಸಿಬ್ಬಂದಿ ‘ನಿಮಗೆ ಹೆಣ್ಣು ಮಗು ಜನಿಸಿದೆ. ತೂಕ ಬಹಳಷ್ಟು ಕಡಿಮೆಯಿರುವ ಕಾರಣ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದ್ದರು. ಗೌರಿ ಹಾಗೂ ಅವರ ಪತಿ ಕನಕಪ್ಪ ದಂಪತಿಗೆ ಆಸ್ಪತ್ರೆಯವರು ನೀಡಿದ ದಾಖಲೆಯಲ್ಲಿಯೂ ‘ಹೆಣ್ಣು ಮಗು’ ಎಂದೇ ನಮೂದಿಸಲಾಗಿದೆ. ಈ ನವಜಾತ ಶಿಶು ಮಂಗಳವಾರ ಮೃತಪಟ್ಟಿದ್ದು ಪೋಷಕರಿಗೆ ಗಂಡು ಮಗುವಿನ ಮೃತದೇಹ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
‘ಕೊನೆಯ ಸಲ ಮಗುವಿನ ಮುಖ ನೋಡಿ ತೆಗೆದುಕೊಂಡು ಹೋಗಬೇಕೆಂದು ಮೃತದೇಹದ ಮೇಲೆ ಹೊದಿಸಿದ್ದ ಬಟ್ಟೆ ತೆಗೆದು ನೋಡಿದಾಗ ಆ ಮಗು ಗಂಡಾಗಿದ್ದು ನೋಡಿ ಅಚ್ಚರಿಯಾಯಿತು. ಸತ್ತಿದ್ದರೂ ಪರವಾಗಿಲ್ಲ ನಾನು ಹೆತ್ತ ಹೆಣ್ಣು ಮಗುವನ್ನೇ ಕೊಡಿ’ ಎಂದು ಆ ದಂಪತಿ ವೈದ್ಯರನ್ನು ಗೋಗರೆದರು.
‘ಒಂದು ವಾರದಿಂದಲೂ ಮಗುವಿನ ಮುಖವನ್ನೇ ತೋರಿಸಿರಲಿಲ್ಲ. ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದಿದ್ದ ವೈದ್ಯರು ಮಂಗಳವಾರ ಬೆಳಿಗ್ಗೆ ಮೃತಪಟ್ಟಿದೆ ಎಂದರು. ಮಗುವಿನ ಮೇಲೆ ಹೊದಿಸಲು ನಾನು ನೀಡಿದ್ದ ಟವಲ್ ಕೂಡ ಅಲ್ಲಿರಲಿಲ್ಲ. ನಾನು ಹೆತ್ತ ಮಗುವನ್ನು ಯಾರು ಏನು ಮಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಮಗುವಿನ ಮೃತದೇಹವಾದರೂ ಕೊಡಿ’ ಎಂದು ಗೌರಿ ಕಣ್ಣೀರು ಹಾಕಿದರು.
‘ಹುಟ್ಟಿದ್ದು ಗಂಡು ಮಗು’ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಆಸ್ಪತ್ರೆಯ ಉಸ್ತುವಾರಿ ನಿರ್ದೇಶಕ ಡಾ. ವೇಣುಗೋಪಾಲ್ ‘ಜನನ ನೋಂದಣಿ ದಾಖಲೆಯಲ್ಲಿ ಗಂಡು ಮಗುವೇ ಹುಟ್ಟಿದ್ದು ಎಂದಿದೆ. ಆದರೆ ಕೆ.ಶೀಟ್ನಲ್ಲಿ ಹೆಣ್ಣು ಮಗು ಎಂದು ಬರೆದಿದ್ದರಿಂದ ಈ ಸಮಸ್ಯೆಯಾಗಿದೆ. ತನಿಖೆ ಮಾಡಲು ಸಮಿತಿ ರಚಿಸಲಾಗಿದೆ. ಎನ್ಡಿಎ ಪರೀಕ್ಷೆ ಮಾಡುವಂತೆ ಹೇಳುತ್ತಿದ್ದು ಅದನ್ನೂ ಮಾಡಲಾಗುವುದು’ ಎಂದರು. ‘ಹೆರಿಗೆ ನಡೆದ ದಿನ ಇದ್ದ ವೈದ್ಯರು ಸಿಬ್ಬಂದಿ ಹೀಗೆ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ ಎರಡು ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.