ಕೊಪ್ಪಳ: ವರ್ಷಪೂರ್ತಿ ಮರಗಳನ್ನು ಪೋಷಣೆ ಮಾಡಿ ಹೆಚ್ಚು ಲಾಭಕ್ಕಾಗಿ ಕಾಯುತ್ತಿದ್ದ ಜಿಲ್ಲೆಯ ಮಾವು ಬೆಳೆಗಾರರಿಗೆ ಮನೆಯಂಗಳದಲ್ಲಿಯೇ ಮಾರುಕಟ್ಟೆ ಲಭಿಸಿದೆ. ‘ಕೊಪ್ಪಳ ಕೇಸರ್’ ತಳಿಯ ಹಣ್ಣುಗಳನ್ನು ಖರೀದಿಸಲು ಹೊರರಾಜ್ಯಗಳ ವ್ಯಾಪಾರಿಗಳು ಎರಡ್ಮೂರು ತಿಂಗಳುಗಳಿಂದ ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ರಾಜ್ಯದ ತೋಟಗಾರಿಕಾ ಕ್ಷೇತ್ರದ ಹಬ್ ಆಗಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ನಾಲ್ಕೂವರೆ ಸಾವಿರ ಹೆಕ್ಟೇರ್ನಲ್ಲಿ ಅಂದಾಜು 40 ಸಾವಿರ ಮೆಟ್ರಿಕ್ ಟನ್ನಷ್ಟು ಫಸಲು ಬಂದಿದೆ. ಬಣ್ಣ ಹಾಗೂ ರುಚಿಗೆ ಹೆಸರಾದ ಕೊಪ್ಪಳ ಕೇಸರ್ ತಳಿಯೇ ಶೇ 90ರಷ್ಟಿದೆ. ಇನ್ನುಳಿದ ಪ್ರದೇಶದಲ್ಲಿ ದಶಹರಿ, ಬೆನೆಶಾನ್, ಸಿಂಧೂರಿ ತಳಿಯ ಹಣ್ಣುಗಳನ್ನು ಬೆಳೆಯಲಾಗಿದೆ.
ಗಿಡಗಳು ಹೂ ಬಿಟ್ಟಾಗಲೇ ನೆರೆಯ ಸಿಂಧನೂರು, ಮಾನ್ವಿ, ಲಿಂಗಸೂಗೂರು, ಹೊಸಪೇಟೆ ಹಾಗೂ ಗದಗದ ಭಜಂತ್ರಿ ಸಮುದಾಯದ ಜನ ತೋಟಗಳನ್ನು ಗುತ್ತಿಗೆ ಪಡೆದು ರೈತರಿಗೆ ಹಣ ಪಾವತಿಸಿದ್ದಾರೆ. ಗುತ್ತಿಗೆ ಪಡೆದವರು ತಾವು ರೈತರಿಗೆ ನೀಡಿದ ಹಣಕ್ಕಿಂತಲೂ ದುಪ್ಪಟ್ಟು ಲಾಭ ಗಳಿಸಿ ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳ, ಛತ್ತೀಸಗಢ, ಜಾರ್ಖಂಡ್ ಹಾಗೂ ಹರಿಯಾಣ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ ವ್ಯಾಪಾರಿಗಳಿಗೆ ಮಾರಾಟ ಮಾಡಿ ರಾಜ್ಯದ ವ್ಯಾಪಾರಿಗಳು ಕೂಡ ಬಂಪರ್ ಲಾಭ ಪಡೆದಿದ್ದಾರೆ.
ಕೊಪ್ಪಳ ತಾಲ್ಲೂಕಿನ ಕಲ್ಲ ತಾವರಗೇರಾ ಗ್ರಾಮದಲ್ಲಿ ಶಾಂತಮ್ಮ ಹಿರೇಮಠ ಹಾಗೂ ಅವರ ಮಗ ಮಂಜುನಾಥ ಆರೂವರೆ ಎಕರೆಯಲ್ಲಿ ‘ಕೊಪ್ಪಳ ಕೇಸರ್’ ಬೆಳೆದಿದ್ದು, ಗಿಡಗಳು ಹೂ ಬಿಟ್ಟಾಗಲೇ ಸ್ಥಳೀಯ ವ್ಯಾಪಾರಿಗಳು ₹11 ಲಕ್ಷಕ್ಕೆ ತೋಟ ಗುತ್ತಿಗೆ ಪಡೆದಿದ್ದು ಇದಕ್ಕೊಂದು ನಿದರ್ಶನ.
ಜಿಲ್ಲೆಯಲ್ಲಿ ಏಪ್ರಿಲ್ ಮಧ್ಯದಲ್ಲಿ ಮಾವಿನ ಋತು ಆರಂಭವಾಗಿದ್ದು, ಮೊದಲು ಪ್ರತಿ ಕೆ.ಜಿ.ಗೆ ₹200 ಇದ್ದಾಗಲೇ ತೋಟ ಗುತ್ತಿಗೆ ಪಡೆದವರಿಗೆ ಬಂಪರ್ ಲಾಭ ಸಿಕ್ಕಿದೆ. ಈಗ ಕೊಪ್ಪಳ ಕೇಸರ್ ಒಂದು ಕೆ.ಜಿ.ಗೆ ₹100ಕ್ಕೆ ಇಳಿಕೆಯಾಗಿದ್ದು, ಹೆಚ್ಚುವರಿಯಾಗಿ ಲಾಭ ಸಿಗುತ್ತಿದೆ. ಹೀಗಾಗಿ ಮಾವು ಬೆಳೆಯುವ ಜಿಲ್ಲೆಯ ರೈತರು ಮಾರುಕಟ್ಟೆಗಾಗಿ ಪರದಾಡುವ ಸ್ಥಿತಿಯಿಲ್ಲ.
ಮರಗಳ ನಿರ್ವಹಣೆಗಾಗಿ ಖರ್ಚು ಮಾಡುವ ಹಣಕ್ಕಾಗಿ ಇನ್ನೊಬ್ಬರ ಬಳಿ ಕೈಯೊಡ್ಡುವ ಸ್ಥಿತಿಯೂ ಜಿಲ್ಲೆಯ ರೈತರಿಗಿಲ್ಲ. ಫಸಲು ಬರುವ ಮೊದಲೇ ಖರ್ಚು ಮಾಡಿದ ಹಣಕ್ಕಿಂತಲೂ ಹೆಚ್ಚು ಸಿಗುತ್ತಿರುವುದು ಅವರ ಖುಷಿಗೆ ಕಾರಣವಾಗಿದೆ.
ಕೊಪ್ಪಳ ಕೇಸರ್ ಹಣ್ಣುಗಳಷ್ಟೇ ರುಚಿಯನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಕೇಸರ್ ತಳಿಗಳು ಕೂಡ ಹೊಂದಿವೆ. ಆದರೆ, ಈ ಎರಡೂ ರಾಜ್ಯಗಳ ಫಸಲು ಮೇ ಅಂತ್ಯದಿಂದ ಆರಂಭವಾಗುತ್ತದೆ. ಆ ವೇಳೆಗಾಗಲೇ ಜಿಲ್ಲೆಯ ಮಾವಿನ ಹಣ್ಣುಗಳು ಶೇ 70ರಷ್ಟು ಮಾರಾಟವಾಗಲಿದ್ದು, ರೈತರಿಗೆ ಸುಲಭವಾಗಿ ಮಾರುಕಟ್ಟೆ ಲಭಿಸಲು ಕಾರಣವಾಗುತ್ತಿದೆ ಎಂದು ಜಿಲ್ಲೆಯ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಆರೂವರೆ ಎಕರೆಯಲ್ಲಿ ಮಾವು ಬೆಳೆಯಲು ₹2.5 ಲಕ್ಷ ಖರ್ಚು ಮಾಡಿದ್ದೇನೆ. ಈಗ ಮೂರು ಪಟ್ಟು ಹೆಚ್ಚು ಲಾಭ ಲಭಿಸಿದ್ದು ನಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆಮಂಜುನಾಥ ಕೊಪ್ಪಳದ ರೈತ
ಹೊರರಾಜ್ಯಗಳ ವ್ಯಾಪಾರಿಗಳು ಸ್ಥಳೀಯರ ನೆರವಿನಿಂದ ಮಾವಿನ ತೋಟಗಳನ್ನು ಗುತ್ತಿಗೆ ಪಡೆಯುತ್ತಿದ್ದಾರೆ. ರೈತರಿಗೆ ಮನೆಯ ಅಂಗಳದಲ್ಲಿಯೇ ಮಾರುಕಟ್ಟೆ ಲಭಿಸುತ್ತಿದೆ ಕೃಷ್ಣ ಸಿ.ಉಕ್ಕುಂದ ಉಪನಿರ್ದೇಶಕ ತೋಟಗಾರಿಕಾ ಇಲಾಖೆ ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.