ಕೊಪ್ಪಳ: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ ಸಂಭ್ರಮದ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.
ಆರಾಧನೆಯ ನಿಮಿತ್ಯ ಮೂರು ದಿನಗಳಿಂದ ಬೆಳಗಿನ ಜಾವದಿಂದ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ತೀರ್ಥಪ್ರಸಾದ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಸುರಿದ ಮಳೆ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನ ಪ್ರಸಾದ ಸೇವಿಸಿದರು.
ರಥೋತ್ಸವ ಸಂಭ್ರಮ: ಆರಾಧನೆಯ ಮೊದಲ ಎರಡು ದಿನ ರಾತ್ರಿ ಲಘು ರಥೋತ್ಸವ ನಡೆದಿತ್ತು. ಕೊನೆಯ ದಿನ ಭಕ್ತರ ಹರ್ಷೋದ್ಗಾರ, ದಾಸರ ಹಾಡುಗಳ ಭಕ್ತಿ ಸಂಗೀತ ನಡುವೆ ರಥೋತ್ಸವ ಸಡಗರರಿಂದ ಜರುಗಿತು. ರಥ ಮಠದ ಪ್ರಾಂಗಣದ ಸುತ್ತಲೂ ಪ್ರದಕ್ಷಣೆಗೆ ತೆಗೆದುಕೊಂಡು ಹೋದಾಗ ಅದರ ಹಿಂದೆಯೇ ಸಾಗಿದ ಭಕ್ತರು ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಪ್ರದಕ್ಷಿಣೆ ಪೂರ್ಣಗೊಂಡು ಸ್ಥಸ್ಥಾನಕ್ಕೆ ಮರಳಿದ ಬಳಿಕ ಭಕ್ತರಲ್ಲಿ ಹರ್ಷೋದ್ಗಾರ ಮನೆಮಾಡಿತ್ತು. ಆಗ ಚಪ್ಪಾಳೆ ಹೊಡೆದು ಖುಷಿಪಟ್ಟರು.
ತರಹೇವಾರಿ ಹೂಗಳಿಂದ ವೃಂದಾವನ, ರಥ, ಮಠದ ಆವರಣ ಹಾಗೂ ಮಠದ ಎದುರು ಇರುವ ಹನುಮಂತ ದೇವರ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ರಥದ ಮೇಲ್ಬಾಗದಲ್ಲಿ ರಾಯರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು. ರಥ ಪ್ರದಕ್ಷಣೆ ಪಥದಲ್ಲಿ ಸಾಗುತ್ತಿದ್ದಂತೆಯೇ ಭಕ್ತರು ಮೇಲಿನಿಂದ ಹೂಮಳೆಗೆರೆದು ಭಕ್ತಿ ಸಮರ್ಪಿಸಿದರು. ಆಗ ರಾಯರನ್ನು ಸ್ತುತಿಸುವ ಹಾಡುಗಳು ಮೊಳಗಿದವು.
ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮೊದಲ ಎರಡು ದಿನಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಮಠದ ಆವರಣ, ಎದುರಿನ ಆವರಣದದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಮುದಾಯಗಳ ಜನ ಬಂದು ಪ್ರಸಾದ ಸೇವಿಸಿದರು. ಸಂಜೆ ಕಲಾವಿದ ವರದೇಂದ್ರ ಗಂಗಾಖೇಡ್ಕರ್ ಅವರಿಂದ ಭಕ್ತಿ ಸಂಗೀತ, ಸೇವಾ ಪುರಸ್ಕಾರ, ವೆಂಕಟನರಸಿಂಹಾಚಾರ್ಯ ಗುಡೆಬೆಲ್ಲೂರು ಅವರಿಂದ ಪ್ರವಚನ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರ ಮೊದಲ ಎರಡು ದಿನಗಳಿಂತಲೂ ಕೊನೆಯ ದಿನ ಹೆಚ್ಚು ಭಕ್ತರು ಮಠದ ಪ್ರಧಾನ ಅರ್ಚಕ ರಘು ಪ್ರೇಮಾಚಾರ್ಯ ಮುಳಗುಂದ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.