ಕೊಪ್ಪಳ: ನಗರದ ಪ್ರಮುಖ ವೃತ್ತ ಹಾಗೂ ಕೂಡು ರಸ್ತೆಗಳಲ್ಲಿ ಕಸ ಹಾಕುವ ಸ್ಥಳಗಳನ್ನು ಗುರುತಿಸಿರುವ ನಗರಸಭೆ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿ ಹತ್ತಿರದ ರಸ್ತೆಯಲ್ಲಿ ಗುರುವಾರ ಕಸ ಹಾಕುವುದು ತಡೆಯಲು ರಂಗೋಲಿ ಅರಳಿಸಿ ಜಾಗೃತಿ ಮೂಡಿಸಿದರು.
ನಗರದ ಆರೇಳು ಕಡೆ ಇಂಥ ಸ್ಥಳಗಳನ್ನು ಗುರುತಿಸಿದ್ದು ಕಸ ಹಾಕಿದ್ದ ಅಲ್ಲಿನ ಸ್ಥಳವನ್ನು ಸ್ವಚ್ಚಗೊಳಿಸಿ ರಂಗೋಲಿ ಹಾಕಿ ಕಸ ಎಲ್ಲೆಂದರಲ್ಲಿ ಚೆಲ್ಲದಂತೆ ಜನರಿಗೆ ಮನವಿ ಮಾಡಿದರು.
ನಗರದಲ್ಲಿ ಮನೆ ಹಾಗೂ ಅಂಗಡಿಗಳಿಂದ ಸಂಗ್ರಹವಾಗುವ ಕಸವನ್ನು ಹಸಿ, ಒಣ, ನೈರ್ಮಲ್ಯ ತಾಜ್ಯ, ಎಲೆಕ್ಟ್ರಾನಿಕ್ ತಾಜ್ಯ, ಬಯೋಮೆಡಿಕಲ್ ತಾಜ್ಯ ಹೀಗೆ ಐದು ಬಗೆಯಲ್ಲಿ ವಿಂಗಡಿಸಿ ನೀಡುವಂತೆ ಹನ್ನೊಂದು ಮಹಿಳೆಯರು ಸಮುದಾಯ ಸಂಚಾಲಕರಾಗಿ ನೇಮಕಗೊಂಡು ಮನೆಮನೆಗೆ ತೆರಳಿ ತಿಳಿವಳಿಕೆ ಮೂಡಿಸಿದರು.
ಗುರುವಾರ ನಡೆದ ಬ್ಲಾಕ್ ಸ್ಪಾಟ್ ನಿರ್ಮೂಲನೆ ಕಾರ್ಯಕ್ರಮದಲ್ಲಿ ನಗರಸಭೆ ನೂತನ ಪೌರಾಯುಕ್ತ ವೆಂಕಟೇಶ ನಾಗನೂರ್, ಸದಸ್ಯರಾದ ಪರಶುರಾಮ ಮೇದಾದ, ವ್ಯವಸ್ಥಾಪಕ ಮುನಿಸ್ವಾಮಿ, ಆರೋಗ್ಯ ನಿರೀಕ್ಷಕರಾದ ಲಾಲಸಾಬ್ ಮನಿಯಾರ್, ರಾಘವೇಂದ್ರ ಚೌಹಾಣ್, ವಿಶ್ವನಾಥ ಯಾದವ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.