ADVERTISEMENT

ಕೊಪ್ಪಳ: ರೇಷ್ಮೆ ಕಚೇರಿ ಪುನರಾರಂಭಕ್ಕೆ ಹೆಚ್ಚಿದ ಒತ್ತಡ

ಹನುಮಸಾಗರದಲ್ಲಿ ಕಟ್ಟಡ ಶಿಥಿಲಗೊಂಡಿದ್ದರಿಂದ ಬೇರೆಡೆಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:32 IST
Last Updated 7 ಸೆಪ್ಟೆಂಬರ್ 2025, 6:32 IST
ಹನುಮಸಾಗರ ರೇಷ್ಮೆ ಇಲಾಖೆಯ ಕಚೇರಿ ಹೊರಭಾಗದ ಗೋಡೆ ಸಿಮೆಂಟ್ ಕಿತ್ತಿರುವುದು
ಹನುಮಸಾಗರ ರೇಷ್ಮೆ ಇಲಾಖೆಯ ಕಚೇರಿ ಹೊರಭಾಗದ ಗೋಡೆ ಸಿಮೆಂಟ್ ಕಿತ್ತಿರುವುದು   

ಹನುಮಸಾಗರ: ಪಟ್ಟಣದ ಹೃದಯಭಾಗದಲ್ಲಿದ್ದ ರೇಷ್ಮೆ ಇಲಾಖೆ ಕಚೇರಿಯ ಕಟ್ಟಡವು ದೀರ್ಘಕಾಲದ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆ ಹಾಗೂ ನಿರಂತರ ಮಳೆಯಿಂದ ಬಿರುಕು ಬಿಟ್ಟಿದೆ. ಚಾವಣಿ ಕುಸಿತದ ಹಂತ ತಲುಪಿದೆ. ಹೀಗಾಗಿ ಅಧಿಕಾರಿಗಳು ಕಚೇರಿಯನ್ನು ತಾತ್ಕಾಲಿಕವಾಗಿ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದಲ್ಲಿರುವ ಸರ್ಕಾರಿ ರೇಷ್ಮೆ ಕೃಷಿ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.

ಹನುಮಸಾಗರದಲ್ಲಿ 40 ವರ್ಷಗಳಿಂದಲೂ ಇದ್ದ ಕಟ್ಟಡ ಶಿಥಿಲಗೊಂಡಿದ್ದರಿಂದ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹನುಮಸಾಗರವು ಹಿಂದೆ ದೊಡ್ಡ ಹೋಬಳಿಯಾಗಿ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರೂ ರೇಷ್ಮೆ ಇಲಾಖೆಯ ಕಚೇರಿ ಇಲ್ಲವೆಂಬ ಕೊರಗು ಉಳಿದುಕೊಂಡಿದೆ.

50–60 ಕಿ.ಮೀ. ದೂರ–ಅಳಲು: ‘ರೇಷ್ಮೆಗೆ ಸಂಬಂಧಿಸಿ ಯಾವುದೇ ಕೆಲಸವಿದ್ದರೂ ನೆರೆಬೆಂಚಿಗೆ ಹೋಗಿ ಬನ್ನಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದು ಕಷ್ಟಸಾಧ್ಯ’ ಎನ್ನುತ್ತಾರೆ ಹನುಮಸಾಗರ ಸುತ್ತಮುತ್ತಲಿನ ರೈತರು.

ADVERTISEMENT

‘ವಕ್ಕಂದುರ್ಗ, ರಾಂಪುರ, ಹಿರೇಗೊಣ್ಣಾಗರ, ಹನುಮನಾಳ, ಜಹಗಿರಗೂಡ, ಕಬ್ಬರಗಿ, ಕಾಟಾಪುರ, ಕಲಾಲಬಂಡಿ ಗ್ರಾಮಗಳ ಸುಮಾರು 300–400 ರೇಷ್ಮೆ ಬೆಳೆಗಾರರು ಪ್ರತಿದಿನ 50–60 ಕಿಲೋಮೀಟರ್ ಪ್ರಯಾಣ ಮಾಡಿ ನೆರೆಬೆಂಚಿಗೆ ಹೋಗಲಾಗುವುದಿಲ್ಲ. ಇದರಿಂದ ಸಮಯ, ಹಣ ಎರಡೂ ವ್ಯರ್ಥವಾಗುತ್ತಿದ್ದು, ರೈತರ ಉತ್ಪಾದನಾ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ’ ಎಂದು ಅವರು ಅಲವತ್ತುಕೊಳ್ಳುತ್ತಾರೆ.

‘ಕಚೇರಿಯನ್ನು ಶಿಥಿಲ ಕಟ್ಟಡದಲ್ಲಿ ನಡೆಸಲು ಸಾಧ್ಯವಿಲ್ಲವೆಂದರೆ ಬಾಡಿಗೆ ಕಟ್ಟಡದಲ್ಲಾದರೂ ಹನುಮಸಾಗರದಲ್ಲೇ ಮುಂದುವರಿಸಬೇಕು. ಹನುಮಸಾಗರದಲ್ಲಿ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಹೆಚ್ಚು’ ಎಂದು ರೈತ ಮುಖಂಡರು ಹೇಳುತ್ತಾರೆ.

‘ನೆರೆಬೆಂಚಿಗೆ ಕಚೇರಿ ಸ್ಥಳಾಂತರವಾದ ಕಾರಣ ಹಲವಾರು ರೈತರ ಅರ್ಜಿ, ಸಹಾಯಧನ ಪ್ರಕ್ರಿಯೆಗಳು, ತಾಂತ್ರಿಕ ಮಾರ್ಗದರ್ಶನ ನಡೆಯುತ್ತಿಲ್ಲ. ಹಣಕಾಸಿನ ಕೊರತೆಯ ನೆಪ ನಮ್ಮ ತೊಂದರೆ ಕಡಿಮೆ ಮಾಡಲಾರದು’ ಎಂದು ಕಿಡಿಕಾರಿದ್ದಾರೆ.

ಅನುದಾನ ಮಂಜೂರಾಗುವವರೆಗೆ ಕಾಲಹರಣ ಮಾಡದೆ ತಾತ್ಕಾಲಿಕ ಪರಿಹಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ.
– ದೇವಪ್ಪ ಮೆಣಸಗಿ, ರಾಜ್ಯಾಧ್ಯಕ್ಷ ಕರ್ನಾಟಕ ಜನ ದರ್ಶಿನಿ ವೇದಿಕೆ

‘ಕಚೇರಿ ಪುನರಾರಂಭಿಸಲು ಕ್ರಮ’

‘ಹನುಮಸಾಗರದ ರೇಷ್ಮೆ ಇಲಾಖೆಯ ಕಚೇರಿಯ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿರುವುದರಿಂದ ರೈತರಿಗೂ ಸಿಬ್ಬಂದಿಗೂ ಜೀವಾಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ನೆರೆಬೆಂಚಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಈ ವಿಷಯವನ್ನು ಕಳೆದ ತಿಂಗಳಲ್ಲೇ ಜಿಲ್ಲಾಧಿಕಾರಿ ಹಾಗೂ ಸಿಇಒ ಅವರ ಗಮನಕ್ಕೂ ತರಲಾಗಿದ್ದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಟ್ಟಡದ ದುರಸ್ತಿ ಅಂದಾಜು ವರದಿಯನ್ನು ಸಿದ್ಧಪಡಿಸಿ ಸಿಇಒ ಅವರಿಗೆ ಸಲ್ಲಿಸಿದೆ. ಅನುದಾನ ಮಂಜೂರಾದ ಕೂಡಲೇ ಕಟ್ಟಡವನ್ನು ದುರಸ್ತಿಗೊಳಿಸಿ ಕಚೇರಿಯನ್ನು ಪುನಃ ಹನುಮಸಾಗರದಲ್ಲೇ ಪ್ರಾರಂಭಿಸುವ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ರಾಜೇಂದ್ರಕುಮಾರ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.