ಕೊಪ್ಪಳ: ಜಿಲ್ಲಾ ಕೇಂದ್ರ ಸಮೀಪದ ಬಹದ್ದೂರ್ ಬಂಡಿ -ಬಿ. ಹೊಸಳ್ಳಿ ಗ್ರಾಮಗಳ ನಡುವಿನ ರಸ್ತೆ ಕೆಲ ತಿಂಗಳಿಂದ ಹದಗೆಟ್ಟಿದ್ದು ರಸ್ತೆ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಳೆಯಾಗದಿದ್ದರೆ ರಸ್ತೆಗಳ ಗುಂಡಿಗಳ ನಡುವೆ ಪರದಾಡಿಕೊಂಡು ಮಾಡುತ್ತ ಸಂಚರಿಸಬೇಕು. ಮಳೆಯಾದರೆ ರಾಡಿ ನಡುವೆ ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳಿಗೆ ಹೇಳಿ ಸಾಕಾಗಿ ಹೋಗಿದ್ದು, ಸುಮ್ಮನಾಗಿದ್ದರು. ಹೊಸಳ್ಳಿ ಕೆರೆ ಹತ್ತಿರ ರಸ್ತೆ ತೀವ್ರ ಹದಗೆಟ್ಟಿದ್ದರಿಂದ ಕೆರೆಯ ಏರಿ ಮೇಲೆ ಜನ ಸಂಚರಿಸುತ್ತಿದ್ದಾರೆ. ಕೆಲವರು ಬಿದ್ದು ಸಣ್ಣಪುಟ್ಟ ಗಾಯವಾಗಿವೆ.
ಕೆಲ ದಿನಗಳಿಂದ ಸತತ ಮಳೆ ಆಗಿದ್ದರಿಂದ ಹೊಸಳ್ಳಿ ರಸ್ತೆ ಈಗ ಮತ್ತಷ್ಟು ಹದಗೆಟ್ಟಿದ್ದು ವಿದ್ಯಾರ್ಥಿಗಳ ತಾಳ್ಮೆಯ ಕಟ್ಟೆ ಒಡೆಯಿತು.
ಶಾಲಾ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ಮರದ ಕೊಂಬೆ ಇಟ್ಟು ಸುಮಾರು ಒಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬಸ್ ತಡೆದು ರಸ್ತೆ ದುರಸ್ತಿಗಾಗಿ ಪ್ರತಿಭಟಿಸಿ ಶಾಸಕರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.