ADVERTISEMENT

ಪ್ರೌಢ ಶಾಲೆಗೆ ಮೂಲಸೌಲಭ್ಯ ಕೊರತೆ

ವಿಷಯವಾರು ಶಿಕ್ಷಕರಿಲ್ಲ, 83 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ!

ಉಮಾಶಂಕರ ಬ.ಹಿರೇಮಠ
Published 14 ಸೆಪ್ಟೆಂಬರ್ 2020, 8:02 IST
Last Updated 14 ಸೆಪ್ಟೆಂಬರ್ 2020, 8:02 IST
ಯಲಬುರ್ಗಾ ತಾಲ್ಲೂಕು ಕೊನಸಾಗರ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಠಾರ ಶಾಲೆ ಕಾರ್ಯಕ್ರಮದ ಅಡಿಯಲ್ಲಿ ಪಾಠ ಮಾಡುತ್ತಿರುವುದು
ಯಲಬುರ್ಗಾ ತಾಲ್ಲೂಕು ಕೊನಸಾಗರ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಠಾರ ಶಾಲೆ ಕಾರ್ಯಕ್ರಮದ ಅಡಿಯಲ್ಲಿ ಪಾಠ ಮಾಡುತ್ತಿರುವುದು   

ಯಲಬುರ್ಗಾ: ಪ್ರೌಢ ಶಾಲೆ ಮಂಜೂರಾಗಿ ತರಗತಿಗಳು ಪ್ರಾರಂಭಗೊಂಡರೂ ಇನ್ನೂವರೆಗೂ ಅದಕ್ಕಾಗಿ ಶಾಲಾ ಕಟ್ಟಡವಿಲ್ಲ. ವಿಷಯವಾರು ಶಿಕ್ಷಕರಿಲ್ಲ. ಈ ಕಾರಣದಿಂದ ತಾಲ್ಲೂಕಿನ ಕೊನಸಾಗರ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆ ಅಷ್ಟಕ್ಕಷ್ಟೆ ಆಗಿದೆ.

ಗ್ರಾಮಸ್ಥರ ಒತ್ತಾಯಕ್ಕೆ 2017ರಲ್ಲಿ ಮಂಜೂರಾದ ಪ್ರೌಢ ಶಾಲೆಯಲ್ಲಿ 83 ವಿದ್ಯಾರ್ಥಿಗಳಿದ್ದಾರೆ. ಆದರೆ ಒಬ್ಬರೇ ಶಿಕ್ಷಕರು ಎಲ್ಲ ತರಗತಿಗಳನ್ನು ನಿರ್ವಹಿಸಬೇಕು.

ಸೂಕ್ತ ಕಟ್ಟಡವಿಲ್ಲದೇ ಸಮುದಾಯ ಭವನದಲ್ಲಿಯೇ ಪಾಠಮಾಡಬೇಕಾದ ಅನಿವಾರ್ಯತೆ ಈ ಶಿಕ್ಷಕರಿಗಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಎಷ್ಟರ ಮಟ್ಟಿಗೆ ಶಿಕ್ಷಣವನ್ನು ಪಡೆದುಕೊಳ್ಳ ಬೇಕೆಂಬುದೇ ಯಕ್ಷಪ್ರಶ್ನೆಯಾಗಿದೆ.

ADVERTISEMENT

ಈ ಬಗ್ಗೆ ಗ್ರಾಮಸ್ಥರು ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಎರಡು ವರ್ಷಗಳ ಹಿಂದೆ ಪ್ರೌಢ ಶಾಲೆಗೆಂದು ಕಟ್ಟಡ ಮಂಜೂರಾಗಿದ್ದರೂ ಭೂಸೇನಾ ನಿಗಮದವರು ಸರಿಯಾಗಿ ನಿರ್ವಹಿಸಿ ಕಟ್ಟಡ ತ್ವರತಗತಿಯಲ್ಲಿ ಪೂರ್ಣಗೊಳಿಸದೇ ಬೇಜವಾಬ್ದಾರಿತನ ತೋರುತ್ತಿರುವುದರಿಂದ ಇಲ್ಲಿಯ ಮಕ್ಕಳು ಸೌಲಭ್ಯ ವಂಚಿತರಾಗುತ್ತಿದ್ದಾರೆ.

ಕಟ್ಟಡ ಕಾಮಗಾರಿಯನ್ನು ತೀರಾ ಕಳಪೆಯಾಗಿ ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದಾರೆ.

ಶಾಸಕರು ಈ ಬಗ್ಗೆ ಕಟ್ಟಡ ಪ್ರಾರಂಭಿಸುವಂತೆ ಸೂಚನೆ ನೀಡಿದ್ದರೂ ಸ್ಪಂದಸದೇ ಉದಾಸೀನ ಮಾಡಿದ ಗುತ್ತಿಗೆದಾರರ ಬಗ್ಗೆ ಜಿಲ್ಲಾಧಿಕಾರಿ ಅವರು ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ಯಮನೂರಪ್ಪ, ಶರಣಪ್ಪ ಪಾಟೀಲ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಶಾಲೆ ಪ್ರಾರಂಭದಿಂದಲೂ ರಂಗನಾಥ ಎಂಬ ಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೊಬ್ಬರೆ ಎಲ್ಲ ವಿಷಯಗಳನ್ನು ಹೇಳಬೇಕು. ಕೊರೊನಾ ಹಿನ್ನೆಲೆಯಲ್ಲಿ ವಠಾರ ಶಾಲೆಯನ್ನು ಪ್ರಾರಂಭಿಸಿದ್ದು, ಸಮುದಾಯ ಭವನ ಹಾಗೂ ಪಾಥಮಿಕ ಶಾಲೆಯ ಆವರಣದಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ.

ಮಕ್ಕಳ ಹಿತದೃಷ್ಟಿಯಿಂದ ಯಾವತ್ತು ಬೇಸರ ಮಾಡಿಕೊಳ್ಳದೇ ಒಬ್ಬ ಶಿಕ್ಷಕರು ನಿಭಾಹಿಸಿಕೊಂಡು ಹೋಗುತ್ತಿದ್ದಾರೆ. ಇವರ ಜೊತೆಗೆ ಇನ್ನಿತರ ಶಿಕ್ಷಕರ ನೇಮಕವಾಗಬೇಕಾಗಿದೆ. ಶಿಕ್ಷಕರ ಕೊರತೆ ನೀಗಿಸುವುದು, ಕಟ್ಟಡ ನಿರ್ಮಾಣಗೊಳ್ಳುವುದು ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಇಲ್ಲಿಯ ಮಕ್ಕಳ ಹಿತಕಾಪಾಡಬೇಕಾಗಿದೆ ಎಂದು ಗ್ರಾಮದ ಮುಖಂಡರಾದ ಮಾರುತಿ ಹರಿಜನ, ಹನಮಂತ ಪೂಜಾರ, ಈರಪ್ಪ, ಶಾಂತಪ್ಪ ಕುಂಬಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.