ತಾವರಗೇರಾ: ಸಮೀಪದ ಪುರ ಗ್ರಾಮದಲ್ಲಿ ಕೆರೆ ನಿರ್ಮಾಣವಾಗಿ 14 ವರ್ಷಗಳು ಕಳೆದಿವೆ. ಆದರೆ ಅದು ತುಂಬಿರುವುದು ಕೇವಲ ಎರಡು ಬಾರಿ ಮಾತ್ರ!.
2005-2006 ರಲ್ಲಿ ಸಣ್ಣ ನೀರಾವರಿ ಇಲಾಖೆಯು ₹32 ಕೋಟಿ ವೆಚ್ಚದಲ್ಲಿ ಈ ಕೆರೆ ನಿರ್ಮಿಸಿದೆ. ಇದು 144.29 ಮಿಲಿಯನ್ ಕ್ಯೂಬಿಕ್ ಫೀಟ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 2009 ರಲ್ಲಿ ಈ ಕೆರೆ ಮೊದಲ ಬಾರಿ ತುಂಬಿ ಕೋಡಿ ಬಿದ್ದಿತ್ತು. 14 ವರ್ಷಗಳ ನಂತರ ಈ ವರ್ಷ ತುಂಬಿದೆ.
ಕೆರೆ ನಿರ್ಮಾಣದಿಂದ ಕನ್ನಾಳ ಹಾಗೂ ಪುರ ಗ್ರಾಮಗಳ ರೈತರ 673 ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಅದರೆ ಈ ಭಾಗದ ರೈತರಿಗೆ ನೀರಾವರಿ ಮಾತ್ರ ಮರೀಚಿಕೆಯಾಗಿದೆ.
ಸಕಾಲಿಕ ನಿರ್ವಹಣೆ, ಸಣ್ಣಪುಟ್ಟ ದುರಸ್ತಿ ಅಷ್ಟಕಷ್ಟೇ ಆಗಿದೆ. ರಕ್ಷಣಾ ಗೋಡೆ ಬಿರುಕು ಬಿಟ್ಟಿದೆ. ಕುಸಿಯುವ ಹಂತದಲ್ಲಿದೆ. ಕೆರೆಯ ತಡೆಗೋಡೆ ಮೇಲೆ ಮುಳ್ಳು ಕಂಟಿ ಬೆಳೆದಿದೆ. ಇರುವೆ, ಇಲಿ, ಹೆಗ್ಗಣ ಹಾಗೂ ಉಡದ ಬಿಲಗಳು ನಿರ್ಮಾಣವಾಗಿವೆ. ಇವು ಕೆರೆ ಏರಿಯ ತಡೆಗೋಡೆಗೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.
ಈ ಕುರಿತು ಸಣ್ಣ ನೀರಾವರಿ ಇಲಾಖೆ ಜೆಇ ರಾಜಶೇಖರ ಕಟ್ಟಿಮನಿ ಪ್ರತಿಕ್ರಿಯಿಸಿ,‘ವಾರ್ಷಿಕ ನಿರ್ವಹಣೆಯ ಭಾಗವಾಗಿ ಕೆರೆ ಏರಿಯ ತಡೆಗೋಡೆಯ ಮೇಲೆ ಹಾಗೂ ಅದರ ಆಸುಪಾಸಿನ ಮುಳ್ಳು ಕಂಟಿಗಳನ್ನು ತೆರವು ಮಾಡಲಾಗಿದೆ. ಸಣ್ಣಪುಟ್ಟ ದುರಸ್ತಿಗೆ ₹5 ಲಕ್ಷ ವೆಚ್ಚ ಮಾಡಲಾಗಿದೆ. 14 ವರ್ಷಗಳ ಬಳಿಕ ಎರಡನೇ ಬಾರಿ ಕೆರೆ ತುಂಬಿದೆ. ನಿರಂತರವಾಗಿ ತುಂಬಿದರೆ ನವಲಿ ಗ್ರಾಮದವರೆಗೂ 6 ಕಿ.ಮೀ. ವಿಸ್ತೀರ್ಣದ ಬಲದಂಡೆಯ ಮೂಲಕ 6 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಕೃಷ್ಣಾ ನದಿ ನೀರು ತುಂಬುವ ಯೋಜನೆಯಲ್ಲಿ ಈ ಕೆರೆ ಇದೆ. ಕೆರೆ ಅಚ್ಚುಕಟ್ಟು, ಏರಿಯ ತಡೆಗೋಡೆ ಬಲವರ್ಧನೆ ಇತ್ಯಾದಿ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲು ಕ್ರಮವಹಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.