ADVERTISEMENT

ಚಿರತೆ ದಾಳಿ: ಬಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:21 IST
Last Updated 12 ಅಕ್ಟೋಬರ್ 2020, 8:21 IST
ಹೃತಿಕ್
ಹೃತಿಕ್   

ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ವಾಲಿಕಿಲ್ಲಾ ಆದಿಶಕ್ತಿ ದೇಗುಲದ ಬಳಿ ಶನಿವಾರ ಚಿರತೆಯ ದಾಳಿಯಿಂದ ಹೈದರಾಬಾದ್‌ನ ಹೃತಿಕ್ (9) ಎಂಬ ಬಾಲಕ ಗಾಯಗೊಂಡಿದ್ದಾನೆ.

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹೃತಿಕ್‌ಗೆ ಹಿಂಬದಿಯಿಂದ ಚಿರತೆ ದಾಳಿ ಮಾಡಿತು. ಪೋಷಕರು ಮತ್ತು ಪ್ರವಾಸಿಗರು ಒಮ್ಮೆಲೇ ಕೂಗಿಕೊಂಡ ಕಾರಣ ಚಿರತೆ ಓಡಿ ಹೋಯಿತು. ಹೃತಿಕ್‌ ತಲೆಗೆ ಪರಚಿದ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಡಿಎಫ್‌ಒ ಭೇಟಿ: ಚಿರತೆ ದಾಳಿ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕಿನ ಆನೆಗೊಂದಿ, ಸಾಣಾಪೂರ, ಹನುಮನಹಳ್ಳಿ ಜಂಗ್ಲಿ ರಂಗಾಪೂರ ಗುಡ್ಡ ಪ್ರದೇಶಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಭಾನು, ತಾಲ್ಲೂಕು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಂಗ್ಲಿ ರಂಗಾಪುರದಲ್ಲಿ ಚಿರತೆ ಸೆರೆಗಾಗಿ ಎರಡು ಬೋನುಗಳನ್ನು ಇಡಲು ಅವರು ಸೂಚಿಸಿದ್ದಾರೆ.

ADVERTISEMENT

ತಾಲ್ಲೂಕಿನ ಆನೆಗೊಂದಿ, ಜಂಗ್ಲಿ ರಂಗಾಪುರ, ಚಿಕ್ಕ ರಾಂಪುರ ಮತ್ತು ಅಂಜನಾದ್ರಿಯಲ್ಲಿ ಎರಡು ದಿನಗಳಿಂದ ಚಿರತೆ ಮತ್ತು ಕರಡಿಗಳು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಜಂಗ್ಲಿ ರಂಗಾಪುರದಲ್ಲಿ ಈಚೆಗೆ ಜಾನುವಾರು ಮೇಯಿಸಲು ಹೋಗಿದ್ದ ಮಹಿಳೆ ಮೇಲೂ ಚಿರತೆ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.