ADVERTISEMENT

ವಿರುಪಾಪುರ ಗಡ್ಡಿ: ಆಕಳು ಕರುವಿನ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 12:19 IST
Last Updated 7 ನವೆಂಬರ್ 2020, 12:19 IST
ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡಿ ಸಮೀಪದ ಬಿಂಚಿಕುಂಟ್ರಿಯಲ್ಲಿ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿರುವುದನ್ನು ಅಧಿಕಾರಿಗಳು ವೀಕ್ಷಿಸಿದರು
ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡಿ ಸಮೀಪದ ಬಿಂಚಿಕುಂಟ್ರಿಯಲ್ಲಿ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿರುವುದನ್ನು ಅಧಿಕಾರಿಗಳು ವೀಕ್ಷಿಸಿದರು   

ಗಂಗಾವತಿ: ತಾಲ್ಲೂಕಿನ ವಿರುಪಾಪುರ ಗಡ್ಡಿ ಸಮೀಪದ ಬಿಂಚಿಕುಂಟ್ರಿಯಲ್ಲಿ ಶುಕ್ರವಾರ ಸಂಜೆ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ.

ಬಿಂಚಿಕುಟ್ರಿ ಗ್ರಾಮದ ನಿವಾಸಿ ವಿರುಪಣ್ಣ ಕರುವನ್ನು ಮನೆ ಮುಂದೆ ಕಟ್ಟಿ ಹಾಕಿದ್ದರು. ಆಗ ಚಿರತೆ ದಾಳಿ ನಡೆಸಿ ಹೊತ್ತೊಯ್ಯಲು ಪ್ರಯತ್ನಿಸಿದೆ. ಸ್ಥಳೀಯರು ಚೀರಾಡಿದಾಗ ಕರುವನ್ನು ಬಿಟ್ಟು ಪರಾರಿಯಾಗಿದೆ. ಕರುವಿನ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ.

ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿರುವ ಗ್ರಾಮಸ್ಥರು ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ADVERTISEMENT

ಕಳೆದ ಗುರುವಾರವಷ್ಟೇ ಆನೆಗೊಂದಿಯ ಆದಿಶಕ್ತಿ ದುರ್ಗಾದೇವಿ ದೇಗುಲದಲ್ಲಿ ಚಿರತೆ ಅಡುಗೆ ಭಟ್ಟರ ಮೇಲೆ ದಾಳಿ ನಡೆಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದುರ್ಗಾದೇವಿ ದೇಗುಲದಲ್ಲಿ ಬೋನ್‌ಗಳನ್ನು ಅಳವಡಿಸಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಗ್ರಾಮಕ್ಕೆ ಎಸಿ, ಡಿಎಫ್‌ಒ ಭೇಟಿ: ಉಪವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಹಾಗೂ ಡಿಎಫ್‌ಒ ಹರ್ಷಾಭಾನು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು. ಗ್ರಾಮದಲ್ಲಿ ಬೋನ್‌ ಅಳವಡಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಸ್ಥರು ಸಂಜೆ ಒಬ್ಬೊಬ್ಬರೇ ತಿರುಗಾಡಬಾರದು. ಮಕ್ಕಳನ್ನು ಹೊರಗಡೆ ಬಿಡಬಾರದು ಎಂದರು. ವಲಯ ಅರಣ್ಯಾಧಿಕಾರಿ ಶಿವರಾಜ ಮೇಟಿ, ಸಿಬ್ಬಂದಿ ಶ್ರೀನಿವಾಸ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.