
ಮುನಿರಾಬಾದ್: ಸಮೀಪದ ಶಿವಪುರ ಬಳಿಯ ತುಂಗಭದ್ರಾ ತೀರದ ನಗರಗಡ್ಡಿ ಮಠದಲ್ಲಿ ಬುಧವಾರ ಮಕರ ಸಂಕ್ರಮಣದ ಅಂಗವಾಗಿ ಹಲವು ಭಕ್ತರು ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿ ದಾಸೋಹ ಕಾರ್ಯಕ್ರಮದಲ್ಲಿ ಊಟ ಮಾಡಿದರು.
ಉತ್ತರಾಯಣ ಪುಣ್ಯಕಾಲ ಶುಭ ಸಂದರ್ಭ ಎಂದು ನಂಬಲಾಗಿರುವ ಮಕರ ಸಂಕ್ರಮಣ ಅಂಗವಾಗಿ ನೂರಾರು ಭಕ್ತರು ನಗರಗಡ್ಡಿ ಮಠಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಮಠದ ವತಿಯಿಂದ ಏರ್ಪಡಿಸಲಾಗಿದ್ದ ದಾಸೋಹದಲ್ಲಿ ಊಟ ಮಾಡಿದರು.
ಇದಕ್ಕೂ ಮುನ್ನ ಶಾಂತಲಿಂಗೇಶ್ವರ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ, ಶಾಂತಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹಾಗೂ ಮೈನಳ್ಳಿ ಮಠದ ಸಿದ್ದೇಶ್ವರ ಶಿವಾಚಾರ್ಯರ ಆಶೀರ್ವಾದ ಪಡೆದರು.
ತರಹೇವಾರಿ ಊಟ: ಗೋದಿ ಪಾಯಸ, ಜೋಳದ ರೊಟ್ಟಿ, ಚಪಾತಿ, ಕಾಳಿನ ಪಲ್ಯ, ಬದನೆಕಾಯಿ, ಅನ್ನ-ಸಾಂಬಾರ ಊಟ ಸವಿದರು.
ವಿದ್ಯಾರ್ಥಿಗಳ ಸೇವೆ: ಹಿಟ್ನಾಳ ಗ್ರಾಮದ ಎಸ್ಆರ್ಎಸ್ಎಂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಅಡುಗೆ ಮಾಡುವ ಮತ್ತು ಭಕ್ತರಿಗೆ ಉಣಬಡಿಸುವ ಕೆಲಸದಲ್ಲಿ ಸಹಾಯ ಹಸ್ತ ಚಾಚುತ್ತಾರೆ.
ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಪ್ಪ ಅರಿಕೇರಿ, ನಿವೃತ್ತ ಮುಖ್ಯ ಶಿಕ್ಷಕ ಜೆ. ಕೃಷ್ಣಮೂರ್ತಿ ಸೇರಿದಂತೆ 32 ವಿದ್ಯಾರ್ಥಿಗಳು ಸೇವೆ ಮಾಡಿದರು. ಬಂಡಿಹರ್ಲಾಪುರ, ಶಿವಪುರ, ಅಗಳಕೇರಾ, ಹುಲಿಗಿ, ಶಹಾಪುರ ಬೇವಿನಹಳ್ಳಿ, ಹಿಟ್ನಾಳ, ಹುಲಿಗಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.