ಕೊಪ್ಪಳ: ‘ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ ಮತ್ತು ಧನ್ ಧಾನ್ಯ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿ ರೈತರು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.
ತಾಲ್ಲೂಕಿನ ಮೆತಗಲ್ನಲ್ಲಿ ನಿರ್ಮಲಾ ಸೀತರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಬಾರ್ಡ್ ಮೂಲಕ ನಿರ್ಮಿಸಲಾದ ಕೃಷಿ ಸಂಸ್ಕರಣಾ ತರಬೇತಿ ಘಟಕ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
‘ವೋಕಲ್ ಫಾರ್ ಲೋಕಲ್’ ಎನ್ನುವುದು ಪ್ರಧಾನಿ ಅವರ ಆಶಯವಾಗಿದ್ದು, ಅದರಂತೆ ಸಂಸ್ಕರಣೆ ಮೂಲಕ ಹಣ್ಣುಗಳ ಮೌಲ್ಯವರ್ಧನೆ ಮಾಡಿ ಬೆಲೆ ಹೆಚ್ಚಿಸುವ ಕೌಶಲವನ್ನು ರೈತರು ರೂಢಿಸಿಕೊಳ್ಳಬೇಕು’ ಎಂದರು.
ಕಿರು ಉದ್ಯಮಗಳ ಮೂಲಕ ಪ್ರಗತಿ ಕಾಣುತ್ತಿರುವ ಕೊಪ್ಪಳ ಜಿಲ್ಲೆ ಉತ್ತರ ಕರ್ನಾಟಕಕ್ಕೆ ‘ಅಕ್ಷಯಪಪಾತ್ರೆ’ ಆಗಿದೆ. ಜಿಎಸ್ಟಿ ತೆರಿಗೆ ಇಳಿತವು ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
‘ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ರೈತರ ಅನುಕೂಲಕ್ಕಾಗಿ ವಿವಿಧ ರಾಜ್ಯಗಳಿಗೆ ₹3,700 ಕೋಟಿಗೂ ಹೆಚ್ಚು ಹಣ ನೀಡಿದೆ. ₹11 ಸಾವಿರ ಕೋಟಿ ಸಾಲಸೌಲಭ್ಯ ಒದಗಿಸಿದೆ. ಧನ್ ಧಾನ್ಯ ಕೃಷಿ ಯೋಜನೆಗಾಗಿ 2025–26ರ ಬಜೆಟ್ನಲ್ಲಿ ₹24 ಸಾವಿರ ಕೋಟಿ ಹಂಚಿಕೆ ಮಾಡಿ, ಇದಕ್ಕೆ ದೇಶದ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದು’ ಎಂದು ಹೇಳಿದರು.
ಶಾಸಕ ಜನಾರ್ದನ ರೆಡ್ಡಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ರಾಜ್ಯ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ವಿಶಾಲ್ ಆರ್., ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.