ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ದಸರಾ ಪ್ರಯುಕ್ತ ಗ್ರಾಮ ದೇವತೆ ಮಲ್ಲಿಯಮ್ಮದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಇತ್ತೀಚೆಗೆ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ ನೂತನ ಮೂರ್ತಿಗೆ ಗಣಪತಿ, ನವಗ್ರಹ, ಅಷ್ಪದಿಕಾಲ್ಪಕರು, ಪಂಚಬ್ರಹ್ಮರು, ಫ್ರಧಾನದೇವಿ ಪೂಜೆ, ಗಣಹೋಮ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ನಡೆದ ಮಹಿಳೆಯರ ಕುಂಭಮೇಳ ಮೂರ್ತಿ ಪ್ರತಿಷ್ಠಾಪನೆಗೆ ಮೆರಗು ತಂದಿತು.
ಈ ಹಿಂದೆ ಮಲಿಯಮ್ಮ ದೇವಿಯ ದೇವಸ್ಥಾನದ ಕಟ್ಟಡ ನಿರ್ಮಾಣವಾಗದೇ ಹಲವಾರು ವರ್ಷಗಳ ಹಿಂದಿನಿಂದ ಗ್ರಾಮಸ್ಥರು ಅದೇ ಜಾಗದಲ್ಲಿ ದೇವಿಯ ದರ್ಶನ ಪಡೆಯುವ ಪರಂಪರೆಯನ್ನು ಮುಂದುವರೆಸಿಕೊಂಡು ಗ್ರಾಮಸ್ಥರು ಹೋಗುತ್ತಿದ್ದರು. ಹೀಗಾಗಿ ಬೆಳಗಟ್ಟಿ ಗ್ರಾಮದ ಮುಖಂಡರು ಈ ದೇವಸ್ಥಾನದ ಜೀರ್ಣೋದ್ದಾರ ಮಾಡುವಲ್ಲಿ ಕಟ್ಟಡ ನಿರ್ಮಾಣಕ್ಕೆ ಒಮ್ಮತದ ತೀರ್ಮಾನ ಕೈಗೊಂಡರು. ಅಲ್ಲದೇ ಗ್ರಾಮದ ಪ್ರತಿಯೊಂದು ಮನೆಯಿಂದ ದೇಣಿಗೆ ಕೊಟ್ಟಿದ್ದರು.
ಗೂಡುಸಾಬ್ ಅಡಿವಿ ಸೋಂಪುರ, ಶಂಕರಗೌಡ ಪಾಟೀಲ, ಬಸನಗೌಡ ಪಾಟೀಲ, ಕನಕನಗೌಡ ಪಾಟೀಲ, ಶಿವನಗೌಡ ಪಾಟೀಲ, ನಿಂಗಪ್ಪ ಚಿಲವಾಡಗಿ, ಫಕೀರಗೌಡ ಪಾಟೀಲ, ನಿಂಗಪ್ಪ ಕಡಗ, ಮುಸ್ತುಸಾಬ್ ಟೈಲರ್, ದೇವೆಂದ್ರಗೌಡ ಪಾಟೀಲ, ಕೋಟೆಪ್ಪ ಕುರ್ತಕೋಟಿ, ಮಲ್ಲಪ್ಪ ಹುಯಿಲಗೋಳ, ಖಾದರಸಾಬ್ ನಡುವಿನಮನಿ, ಹಸನ್ಸಾಬ್ ಹುಡೇದಮನಿ ,ಮೈನುಸಾಬ್ ಚಕ್ಕಡಿ, ಗುಡದನಗೌಡ ಪಾಟೀಲ, ಹೊನ್ನಪ್ಪಗೌಡ ಪಾಟೀಲ, ವಿಷ್ಣು ಹಾಳಕೇರಿ, ಮುದಿಯಪ್ಪ ಚಿಲವಾಡಗಿ, ಜಂಗ್ಲಿಸಾಬ ಒಂಟಿ, ಮೋದಿನ್ ಸಾಬ ಆಲೂರ, ದೇವಪ್ಪ ತಳವಾರ ಇದ್ದರು.
ಗುಡುಸಾಬ ಆರ್ಥಿಕ ನೆರವು
ಮಲಿಯಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆಗೆ ಮುಸ್ಲಿಂ ಸಮುದಾಯದ ಗುಡುಸಾಬ ಅಡವಿಸೋಮಪುರ ನೆರವು ನೀಡುವ ಮೂಲಕ ಸಾಮರಸ್ಯ ಮೆರೆದಿದ್ದಾರೆ.
ದುರ್ಗಮ್ಮ ಮತ್ತು ಮಲ್ಲಿಯಮ್ಮ ದೇವಸ್ಥಾನದ ಉಸ್ತುವಾರಿ ವಹಿಸಿಕೊಂಡು ಗ್ರಾಮಸ್ಥರನ್ನು ಒಗ್ಗೂಡಿಸಿ ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ್ದಲ್ಲದೆ, ಸ್ವತಃ ₹1 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡಿದ್ದಾರೆ.
ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಗುಡುಸಾಬ ಅಡವಿ ಸೋಮಪುರ ಅವರನ್ನು ದೇವಸ್ಥಾನದ ಸಮಿತಿ ಮುಖಂಡರು ಸನ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.