ಕುಷ್ಟಗಿ: ತಾಲ್ಲೂಕಿನ ಶಾಖಾಪುರ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ರಥೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನೆರವೇರಿತು.
ಕೋವಿಡ್ ಭೀತಿ ನಡುವೆಯೂ ಯಾವ ಅಡ್ಡಿ ಆತಂಕ ಇಲ್ಲದೆ ಗ್ರಾಮಸ್ಥರು ರಥೋತ್ಸವವನ್ನು ಅದ್ಧೂರಿಯಾಗಿ ನಡೆಸಿದರು. ಸುತ್ತಲಿನ ಹಾಗೂ ಶಾಖಾಪುರ ಗ್ರಾಮದ ನೂರಾರು ಜನರು, ಮಹಿಳೆಯರು, ಮಕ್ಕಳು ಭಾಗಿಯಾಗಿ ಸಂಭ್ರಮಿಸಿದರು.
ಬೆಳಿಗ್ಗೆ ಮಾರುತೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ರಥಕ್ಕೆ ವಿಶೇಷ ಪೂಜೆ, ಹಿರೇಅರಳಿಹಳ್ಳಿ ಮತ್ತಿತರೆ ಗ್ರಾಮಗಳ ದೈವದವರು ಮೆರವಣಿಗೆ ಮೂಲಕ ತಂದ ಬೃಹತ್ ಗಾತ್ರದ ವಿವಿಧ ಪುಷ್ಪಗಳಿಂದ ಅಲಂಕರಿಸಿದ ಹಾರಗಳನ್ನು ರಥಕ್ಕೆ ಸಮರ್ಪಿಸಲಾಯಿತು. ಮಹಿಳೆಯರು ಪೂರ್ಣಕುಂಭ ಸೇವೆ ಸಲ್ಲಿಸಿದರು. ಮಾರುತೇಶ್ವರ ಉತ್ಸವ ಮೂತಿಯನ್ನು ಪಲ್ಲಕ್ಕಿಯಲ್ಲಿ ಕರೆತರಲಾಯಿತು.
ನಂತರ ಡೊಳ್ಳು, ಭಜಂತ್ರಿ ಕಲಾ ತಂಡದವರ ವಾದ್ಯಮೇಳದೊಂದಿಗೆ ರಥೋತ್ಸವ ನಡೆಯಿತು. ಅಧಿಕಾರಿಗಳ ಸೂಚನೆ ಅನ್ವಯ ರಥೋತ್ಸವ ಸಂಪ್ರದಾಯವನ್ನು ಕೆಲವೇ ಅಂತರದಲ್ಲಿ ಎಳೆಯಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ ಸೇರಿದಂತೆ ಅನೇಕ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಗ್ರಾಮದ ಹಿರಿಯರು
ಇದ್ದರು.
ರಾತ್ರಿ ಗ್ರಾಮದ ಕಲಾವಿದರು ಸಾಮಾಜಿಕ ನಾಟಕ ಅಭಿನಯಿಸಿದರು.
ಅಂತರ ಲೆಕ್ಕಕ್ಕಿಲ್ಲ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜನರು ಪಾಲಿಸದಿರುವುದು ಕಂಡುಬಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.