ADVERTISEMENT

ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 16:09 IST
Last Updated 3 ಜೂನ್ 2020, 16:09 IST

ಕೊಪ್ಪಳ:ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಒತ್ತಾಯಿಸಿ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬುಧವಾರ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಲಾಯಿತು.

ದ್ರಾವಿಡ ಭಾಷೆಗಳಿಗೆ ಪ್ರಾಚಿನ ಇತಿಹಾಸ ಇದ್ದುದರಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ 10 ವರ್ಷಗಳಾದವು. ತಮಿಳಿಗೆ ಸ್ವಾಯತ್ತತೆಯನ್ನು ನೀಡಿ ಹಲವು ವರ್ಷಗಳಾದವು. ಕನ್ನಡ, ತೆಲುಗು ಭಾಷೆಗಳಿಗೆ ಇಲ್ಲಿಯವರೆಗೆ ಸ್ವಾಯತ್ತತೆ ನೀಡಲಾಗಿಲ್ಲ. ಇದಕ್ಕೆ ಮೈಸೂರಿನ ಭಾರತಿಯ ಭಾಷಾ ಸಂಸ್ಥಾನವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಈವರೆಗೆ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಕನಿಷ್ಟ ಕ್ಷೇತ್ರ ಕಾರ್ಯಕ್ಕಾಗಿ ವಿಡಿಯೊ ಕ್ಯಾಮೆರಾ ಮುಂತಾದ ಆಧುನಿಕ ಸೌಕರ್ಯಗಳನ್ನು ಸಹ ಒದಗಿಸಿಲ್ಲ. ಈವರೆಗಿನ ಪ್ರಾಜೆಕ್ಟ್ ಗ್ರಂಥಗಳನ್ನು ಪ್ರಕಟಿಸಿಲ್ಲ. ಫೆಲೋಗಳು ಆಯ್ದುಕೊಂಡ ಪ್ರಾಜೆಕ್ಟ್ ಕೆಲಸವನ್ನು ಪೂರ್ಣಗೊಳಿಸುವ ಮೊದಲೇ ಅವರನ್ನು ಕಿತ್ತುಹಾಕಿ ಬೇರೆಯವರನ್ನು ನೇಮಿಸಿಕೊಳ್ಳುವ ಜಾಹೀರಾತಿನ ಹುನ್ನಾರವೇನು?. ಪ್ರಾಜೆಕ್ಟ್ ರಿಪೋರ್ಟ್ ಪ್ರಕಟಿಸದೆ ಪ್ರೀ ಮಾಚ್ಯುವರ್ ಎಂದು ಷರಾ ಬರೆದು ಸ್ವಾಯತ್ತತೆ ಪಡೆಯಲು ಅಡ್ಡಗಾಲು ಹಾಕುತ್ತಿರುವುದು ಯಾವ ನ್ಯಾಯ?.

ADVERTISEMENT

ಈ ಉನ್ನತ ಕನ್ನಡ ಅಧ್ಯಯನ ಕೇಂದ್ರವನ್ನು ಕನ್ನಡ ನಾಡಿನಲ್ಲಿ ಕುಳಿತು ವಿರೋಧಿಸುತ್ತಿರುವುದು ಖಂಡನೀಯ. ಕನ್ನಡಿಗರು ಈ ಕುರಿತು ಪ್ರತಿಭಟಿಸಿ, ಮನವಿಗಳನ್ನು ಅರ್ಪಿಸಿದರೂ ಕಣ್ಣುಮುಚ್ಚಿ ಕುಳಿತಿರುವದರ ರಹಸ್ಯವೇನು?. ನಿರ್ದೇಶಕರು ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣದೆ ಕನ್ನಡದ ಉಪ್ಪು ತಿಂದು ದ್ರೋಹ ಬಗೆಯುತ್ತಿದ್ದಾರೆ. ಆದ್ದರಿಂದ ತಾವು ಅವರನ್ನು ಕಿತ್ತು ಹಾಕಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಮಿತಿಯ ಕಾರ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು,ಎಚ್.ಎಸ್.ಪಾಟೀಲ, ಎ.ಎಂ.ಮದರಿ, ಬಸವರಾಜ ಆಕಳವಾಡಿ, ಡಾ.ಚೆನ್ನಬಸಪ್ಪ ಚಿಲ್ಕರಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.