ADVERTISEMENT

ಮುಂಗಾರು: ಬಿತ್ತನೆಗೆ ರೈತರ ಸಿದ್ಧತೆ

ಭೂಮಿ ಹದ ಮಾಡುತ್ತಿರುವ ಅನ್ನದಾತರು: ಬೀಜ, ರಸಗೊಬ್ಬರ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 28 ಮೇ 2022, 12:57 IST
Last Updated 28 ಮೇ 2022, 12:57 IST
ಕುಕನೂರಿನಲ್ಲಿ ರೈತರೊಬ್ಬರು ಭೂಮಿ ಹದ ಮಾಡುತ್ತಿರುವುದು
ಕುಕನೂರಿನಲ್ಲಿ ರೈತರೊಬ್ಬರು ಭೂಮಿ ಹದ ಮಾಡುತ್ತಿರುವುದು   

ಕುಕನೂರು: ತಾಲ್ಲೂಕಿನಾದ್ಯಂತ ಪೂರ್ವ ಮುಂಗಾರು ಚುರುಕು ಪಡೆದಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿಯನ್ನು ಸಜ್ಜುಗೊಳಿಸುತ್ತಿದ್ದಾರೆ. ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಯುಗಾದಿ ಹಬ್ಬದ ಬಳಿಕ ಕಾಣಿಸಿಕೊಂಡ ಪೂರ್ವ ಮುಂಗಾರು ಮಳೆ, ಮೇ ಎರಡನೇ ವಾರದಲ್ಲಿ ಚುರುಕಾಗಿದೆ. ಹಲವು ಹದ ಮಳೆಗಳು ಬಿದ್ದಿದ್ದು, ಭೂಮಿ ಉಳುಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ADVERTISEMENT

ಮುಂಗಾರು ಹಂಗಾಮು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ನೆರವಾಗಲು ಕೃಷಿ ಇಲಾಖೆ ಕೂಡ ಸಿದ್ಧವಾಗಿದೆ. ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳು ಸೇವೆ ಒದಗಿಸುತ್ತಿವೆ. ಬಿತ್ತನೆ ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರ ತೆರೆಯಲು ಕೃಷಿ ಇಲಾಖೆ ನಿರ್ಧರಿಸಿದೆ. ಶೇಂಗಾ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ ಬರುತ್ತಿದೆ.

ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರು ಹಂಗಾಮು ಈರುಳ್ಳಿ ಬಿತ್ತನೆಗೆ ಬೆಳೆಗಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಚೆಗೆ ಸುರಿದ ಮಳೆಗೆ ತಾಲ್ಲೂಕಿನ ಹಲವೆಡೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲವರು ಬಿತ್ತನೆ ಬೀಜ ಸಂಗ್ರಹದಲ್ಲಿ ತೊಡಗಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಪ್ರಾಣೇಶ್ ಹಾದಿಮನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.