ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ನವರಾತ್ರಿಯ ದುರ್ಗಾದೇವಿ ಪುರಾಣೋತ್ಸವದ ಅಂಗವಾಗಿ ದೇವಿಗೆ ಕುಂಭಾಭಿಷೇಕ, ಕುಂಭದ ಮೆರವಣಿಗೆಯು ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.
ಮೆರವಣಿಗೆಯುದ್ದಕ್ಕೂ ದೇವಿಯ ನಾಮಸ್ಮರಣೆ ಮಾಡುವ ಜೊತೆಗೆ ಮಕ್ಕಳು ದೇವತೆಗಳ ವೇಷ ಧರಿಸಿ ಗಮನ ಸೆಳೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಕೋವಿಡ್ ಕಾರಣದಿಂದ ಹಿಂದಿನ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿರಲಿಲ್ಲ. ಈ ಬಾರಿ ಯಾವ ಆತಂಕವಿಲ್ಲದೆ ಜೋರಾಗಿ ನಡೆಯಿತು. ದ್ಯಾಮವ್ವ ದೇವಿ ಪುರಾಣೋತ್ಸವ ಒಂಬತ್ತು ದಿನಗಳ ಕಾಲ ನೆರವೇರಿತು. ಗಣೇಶ ಶಾಸ್ತ್ರಿಗಳು ಹಾಗೂ ಗುರುನಾಥಸ್ವಾಮಿಗಳು ಏಕದಂಡಿಗಮಠ ಅವರು 18 ಅಧ್ಯಾಯಗಳ ಪಠಿಸಿದರು.
ಬುಧವಾರ ಲೋಕ ಕಲ್ಯಾಣಕ್ಕಾಗಿ, ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗಾಗಿ ಕುಂಭದ ಮೆರವಣಿಗೆ ಜರುಗಿತು. ಮುದ್ದಾಂಬಿಕಾ ದೇವಿ, ಅನ್ನಪೂಣೇಶ್ವರಿ ದೇವಿ, ಕಾಳಿಕಾ ದೇವಿ ಹಾಗೂ ದ್ಯಾಮವ್ವ ದೇವಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಫಕೀರೇಶ್ವರ ಸ್ವಾಮೀಜಿ, ಶೇಖರಯ್ಯ ಹಿರೇಮಠ, ಗಣೇಶ ಶಾಸ್ತ್ರಿಗಳು ಅಭಿಷೇಕ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.