ಕೊಪ್ಪಳ: ತಾಲ್ಲೂಕಿನ ಮುದ್ಲಾಪುರ ಗ್ರಾಮದಿಂದ ಕಿನ್ನಾಳ ಮತ್ತು ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಗ್ರಾಮಸ್ಥರೇ ಹಣ ಸಂಗ್ರಹಿಸಿ ರಸ್ತೆ ನಿರ್ಮಿಸಿದ್ದಾರೆ.
ತಾಲ್ಲೂಕಿನ ಮುದ್ಲಾಪುರವು ಗಂಗಾವತಿ ಕ್ಷೇತ್ರಕ್ಕೆ ಒಳಪಡುತ್ತದೆ. ಹಾಗಾಗಿ ಗಂಗಾವತಿ ಮತ್ತು ಕೊಪ್ಪಳ ಶಾಸಕರಿಗೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಬಹಳಷ್ಟು ಬಾರಿ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕಿನ ಮುದ್ಲಾಪುರದಿಂದ ಕಿನ್ನಾಳ ಗ್ರಾಮಕ್ಕೆ 3 ಕಿಲೋ ಮೀಟರ್ ರಸ್ತೆ ಇದೆ. ಈ ರಸ್ತೆಯ ಮೂಲಕ ಮಕ್ಕಳು, ವೃದ್ಧರು, ಗರ್ಭಿಣಿಯರು, ರೋಗಿಗಳು ಸಂಚಾರ ಮಾಡುತ್ತಿದ್ದು, ರಸ್ತೆಯು ಗುಂಡಿಗಳಿಂದಲೇ ಆವೃತವಾಗಿದೆ. ಇದರಿಂದ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಆದರೆ ಮುದ್ಲಾಪುರ ಗ್ರಾಮಸ್ಥರು ತಾವೇ ರಸ್ತೆ ನಿರ್ಮಾಣ ಮಾಡಿಕೊಳ್ಳಲು ನಿರ್ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. ಗ್ರಾಮಸ್ಥರೆಲ್ಲರೂ ಹಣ ಹಾಕಿದ್ದಾರೆ. ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರೇ ಉಚಿತವಾಗಿ ಇಟಾಚಿ, ಜೆಸಿಬಿ ಮತ್ತು ಟ್ರ್ಯಾಕ್ಟರ್ಗಳನ್ನು ಬಳಕೆ ಮಾಡಿಕೊಂಡಿದ್ದಾರೆ.
ಮುದ್ಲಾಪುರ ಗ್ರಾಮವು ಹಿರೇಹಳ್ಳ ಯೋಜನೆ ವ್ಯಾಪ್ತಿಯಲ್ಲಿದ್ದು, ಜಲಾಶಯಕ್ಕೆ ತೊಂದರೆಯಾದರೆ ಇದೇ ರಸ್ತೆಯ ಮೂಲಕವೇ ಹೋಗಬೇಕು. ಗ್ರಾಮಸ್ಥರೆಲ್ಲರೂ ಹಣ ಸಂಗ್ರಹಿಸಿ, ರಸ್ತೆ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮಸ್ಥ ವಿರುಪಾಕ್ಷಪ್ಪ ಬಾರಕೇರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.