ADVERTISEMENT

ತಂದೆ ಹೇಳಿದ್ದು ‌ಕ್ಷೇತ್ರದ ಜನರ ಅಭಿಪ್ರಾಯ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 6:24 IST
Last Updated 25 ಜುಲೈ 2022, 6:24 IST
   

ಕೊಪ್ಪಳ: ಶಿಕಾರಿಪುರದ ಜನರ ಒತ್ತಾಸೆ ಹಾಗೂ ಅಭಿಪ್ರಾಯವನ್ನು ನನ್ನ ತಂದೆ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ‌ ಎಂದು ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸೋಮವಾರ ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಹಾಗೂ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ 'ಅಭಿನವ ಬಸವಣ್ಣ ಎಂದು ಖ್ಯಾತರಾದ ಗವಿಶ್ರೀಗಳ ದರ್ಶನ ಪಡೆಯಲು ಕೊಪ್ಪಳಕ್ಕೆ ಬಂದಿರುವೆ. ಇಲ್ಲಿಗೆ ಬಂದರೆ ಪ್ರೇರಣೆ ಸಿಗುತ್ತದೆ. ಶಿಕಾರಿಪುರ ಬಗ್ಗೆ ನಮ್ಮ ತಂದೆಗೆ ಅವಿನಾಭಾವ ಸಂಬಂಧ ಇದೆ. ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತರಾದವರನ್ನು ಆಯ್ಕೆ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಯಡಿಯೂರಪ್ಪ 40 ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷವೂ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಕ್ಷೇತ್ರದ ಜನರ ಅಭಿಪ್ರಾಯದಂತೆ ನನಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾಗಿ ಹೇಳಿದ್ದಾರೆ.

ADVERTISEMENT

ಹೈಕಮಾಂಡ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಜನರು ಬಯಸಿದಲ್ಲಿ ಹಾಗೂ ಪಕ್ಷ ಟಿಕೆಟ್ ನೀಡಿದಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ‌. ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ' ಎಂದರು.

ವಿಧಾನಸಭಾ ಚುನಾವಣೆಗೆಎಂಟು ತಿಂಗಳಿದೆ. ಈಗಲೇ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಗಾದಿಗಾಗಿ ಕಿತ್ತಾಡುತ್ತಿರುವುದು ಹಾಸ್ಯಾಸ್ಪದ. ಅವರು ಕಿತ್ತಾಡಿಕೊಳ್ಳಲಿ. ಇದರಿಂದ ನಮಗೇನೂ ನಷ್ಟವಿಲ್ಲ. ನಮ್ಮ ಪಕ್ಷದ ಸಂಘಟನೆ ನಿರಂತರವಾಗಿದೆ. ಮಂದೆಯೂ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.