ಕೊಪ್ಪಳ: ಹಬ್ಬಗಳ ತಿಂಗಳು ಎಂದೇ ಕರೆಸಿಕೊಳ್ಳುವ ನವರಾತ್ರಿ, ಆಯುಧಪೂಜೆ, ವಿಜಯದಶಮಿ, ಬನ್ನಿಹಬ್ಬಕ್ಕೆಬೆಲೆ ಏರಿಕೆ ಖರೀದಿ ಉತ್ಸಾಹವನ್ನು ಕಡಿಮೆ ಮಾಡಿದೆ.
ಮಳೆಯಿಂದ ಹೂವು, ಹಣ್ಣು, ತರಕಾರಿಗಳ ಆವಕ ಕಡಿಮೆಯಾಗಿದೆ ಅಲ್ಲದೆ, ಕೆಲವು ಕಡೆ ಕೊಳೆತು ಹೋಗಿರುವುದರಿಂದ ಜನರು ಖರೀದಿಸದೇ ಹೊಲದಲ್ಲಿಯೇ ಬಿಟ್ಟಿದ್ದಾರೆ. ಕೆಲವು ಕಡೆಯಿಂದ ಮಾರಾಟಕ್ಕೆ ಬಂದ ಹೂವು, ಹಣ್ಣು, ತರಕಾರಿ ಬೆಲೆ ದುಪ್ಪಟ್ಟಾಗಿದೆ. ಇದರಿಂದ ಜನರು ಸಂಪ್ರದಾಯದಂತೆ ಪೂಜೆಗೆ ಬೇಕಾದಷ್ಟು ಮಾತ್ರ ಸಾಮಗ್ರಿಯನ್ನು ಖರೀದಿ ಮಾಡುತ್ತಿದ್ದಾರೆ.
ದೇವಿ ಪೂಜೆ, 9 ದಿನಗಳ ಕಾಲ ಘಟ್ಟ ಹಾಕಿದವರು, ಪುರಾಣ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳನ್ನು ಆಚರಿಸುವವರು ಅನಿವಾ ರ್ಯವಾಗಿ ಖರೀದಿ ಮಾಡುವಂತೆ ಆಗಿದೆ. ನಗರದ ಪ್ರಮುಖ ಮಾರುಕಟ್ಟೆ ಗಳಲ್ಲಿ ಅಷ್ಟೊಂದು ಗಡಿಬಡಿ ಮಂಗಳವಾರ ಕಂಡು ಬರಲಿಲ್ಲ. ಬುಧವಾರ ಆಯುಧ ಪೂಜೆಗೆ ವಾಹನ ಸಿಂಗರಿಸುವವರು. ಹೊಸ ವಾಹನ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಕೊರೊನಾ, ಲಾಕ್ಡೌನ್ ಕಾರಣದಿಂದ ಜನರು ಈಗ ಚೇತರಿಸಿಕೊಳ್ಳುತ್ತಿದ್ದು, ವಾಹನಗಳ ಖರೀದಿಯಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ. ಚೆಂಡು ಹೂವುಗಳಿಗೆ ವ್ಯಾಪಕ ಬೇಡಿಕೆ ಇದ್ದು, ಕೆಜಿಗೆ ₹ 50ರಿಂದ ₹ 100ಕ್ಕೆ ಮಾರಾಟವಾಗಿದೆ. ಆಯುಧಪೂಜೆ ದಿನದಂದೇ ಬೆಳಿಗ್ಗೆ ಖರೀದಿಸುವವರ ಸಂಖ್ಯೆ ಹೆಚ್ಚಿರು ವುದರಿಂದ ವ್ಯಾಪಾರಸ್ಥರು ಅಷ್ಟೊಂದು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರಲಿಲ್ಲ.
ಹೂವಿನ ವ್ಯಾಪಾರ ನೀರಸ
ಗಂಗಾವತಿ: ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಬುಧವಾರ ಗುಂಡಮ್ಮ ಕ್ಯಾಂಪಿನ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿಗೆ ಗ್ರಾಹಕರಿಲ್ಲದೆ ನಿರಸ ವ್ಯಾಪಾರ ಕಂಡು ಬಂದಿತು.
ಕೋವಿಡ್ ಕಾರಣ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವು ಸಹ ಹಬ್ಬ ಕಳೆಗುಂದಿದೆ. ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ, ಬೂದು ಕುಂಬಳಕಾಯಿ, ಬಾಳೆ ಕಂದುಗಳ ಮಾರಾಟದ ವ್ಯವಸ್ಥೆ ಕಲ್ಪಿಸಿದರೂ ಖರೀದಿಸಲು ಗ್ರಾಹಕರ ಇಲ್ಲ.
ತಾಲ್ಲೂಕಿನ ಹೇಮಗುಡ್ಡ ದೇವಸ್ಥಾನ, ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ಅಂಬಾರಿ ಮೆರವಣಿಗೆ ನಿಷೇಧಿಸಲಾಗಿದ್ದು, ಕೇವಲ ಪೂಜೆಗಳು ನಡೆಯಲಿವೆ.
ಮನೆಯಲ್ಲಿ ಮಾತ್ರ ಸಂಭ್ರಮದಿಂದ ಹಬ್ಬ ಆಚರಿಸಲು ಅವಕಾಶ ಇದ್ದರೂ ಜನರು ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬಜಾರಿನತ್ತ ಮುಖ ಮಾಡಿಲಿಲ್ಲ.
ನಗರದ ಗುಂಡಮ್ಮ ಕ್ಯಾಂಪಿನಲ್ಲಿ ಆಯುಧ ಪೂಜೆಗೆ ಬೇಕಾಗುವ ಎಲ್ಲ ತರಹದ ಹೂಗಳು ಇದ್ದರು. ಜನ ಖರೀದಿಗೆ ಆಗಮಿಸಿಲ್ಲ. ಚೆಂಡೂ ಹೂ ಕೆ.ಜಿಗೆ ₹ 100, ಅಡಿಕೆ ಹೂ ₹ 60, ಬಾಳೆಕಂದು ಜೋಡಿ ಸಣ್ಣದು ₹ 30, ದೊಡ್ಡದು ₹ 100, ರೇಷ್ಮೆ ಹೂ ₹ 100, ಬೂದು ಕುಂಬಳಕಾಯಿ ₹ 60, ಮಾವಿನ ತೋರಣ ₹ 40, ಜೋಡಿ ಕಬ್ಬಿಗೆ ₹ 60 ಇತ್ತು.
ಹಾಗೇಯೆ ಮಲ್ಲಿಗೆ ಹೂ ಪ್ರತಿ ಕೆ.ಜಿಗೆ ₹ 600, ಕನಕಾಂಬರ ₹ 2000, ಗುಲಾಬಿ ₹ 400, ಸೆವಂತಿಗೆ ₹ 200 ಬೆಲೆ ಹೊಂದಿತ್ತು. ಕೆಲ ಸಮಯದ ನಂತರ ವ್ಯಾಪಾರಸ್ಥರು ಭಾಗಶಃ ಬೆಲೆ ಇಳಿಸಿದರು, ಜನರ ಸುಳಿವು ಕಾಣಲಿಲ್ಲ.
ಹಣ್ಣುಗಳ ವ್ಯಾಪಾರ ಕೂಡ ನಡೆಯಲಿಲ್ಲ. ಮಾರುಕಟ್ಟೆಯಲ್ಲಿ ಸೆಬು ಕೆ.ಜಿ ₹ 100, ಸಿತಾಫಲ ₹ 100, ಪೇರಳೆ ₹ 50, ಆರೇಂಜ್ ₹ 50, ದಾಳಿಂಬೆ ₹ 140, ಡ್ರಾಗ್ಯನ್ ಫ್ರೂಟ್ ₹ 100, ಪಪ್ಪಾಯಿ ಒಂದಕ್ಕೆ ₹ 30, ಸಪೋಟಾ ₹ 40 ಬೆಲೆ ಇತ್ತು.
ಹಬ್ಬಕ್ಕೆ ವ್ಯಾಪಾರ ನಡೆಸಿ ನಾಲ್ಕು ಬಿಡಿಗಾಸು ಜೋಡಿಸಿಕೊಳ್ಳಲು ಬಂದಿರುವ ಹಳ್ಳಿಗಳ ರೈತರು, ವ್ಯಾಪಾರ ಇಲ್ಲದೆ ನಿರಾಸೆ ಅನುಭವಿಸಿದ್ದಾರೆ. ಬಸಾಪಟ್ಟಣ, ಚಿಕ್ಕಮಾದಿನಾಳ, ಉಡಮಕಲ್ ಸೇರಿದಂತೆ ಇತರೆ ಭಾಗದ ರೈತರು ನೇರವಾಗಿ ತಂದು ಹೂ, ಬಾಳೆಕಂದು ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು.
‘ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರವೇ ಇಲ್ಲ. ವ್ಯಾಪಾರ ಮಾಡಿ ಬಂದ ಹಣದಿಂದ ಮಕ್ಕಳಿಗೆ ಬ್ಯಾಗ್, ಬಟ್ಟೆ ತರಬೇಕಿತ್ತು. ಆದರೆ ವ್ಯಾಪಾರ ಆಗಲಿಲ್ಲ ಎಂದು ಬಾಳೆ ಕಂದು ವ್ಯಾಪಾರಿ ಶಂಕ್ರವ್ವ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.