ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ಮಧ್ಯದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮೂರು ದಿನಗಳ ರಘುವರ್ಯತೀರ್ಥರ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ಲಭಿಸಿತು.
ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹಾಗೂ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯ ತೀರ್ಥ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪೂರ್ವಾರಾಧನೆ ಅಂಗವಾಗಿ ಸತ್ಯಾತ್ಮತೀರ್ಥ ಶ್ರೀಗಳಿಂದ ನ್ಯಾಯ ಸುಧಾಪಾಠ, ಭಕ್ತರಿಗೆ ಮುದ್ರಾಧಾರಣೆ, ಉಭಯ ಶ್ರೀಗಳಿಂದ ಪದ್ಮನಾಭ ತೀರ್ಥರ ಮೂಲ ವೃಂದಾವನ ಮುಂಭಾಗದಲ್ಲಿ ನೆಲೆಸಿರುವ ರಘುವರ್ಯತೀರ್ಥರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ, ಯತಿಗಳಿಗೆ ಹಸ್ತೋದಕ, ಭಕ್ತರಿಗೆ ತೀರ್ಥ- ಪ್ರಸಾದ ವಿನಿಯೋಗ, ಸಂಜೆ ಸಭಾ ಕಾರ್ಯಕ್ರಮ ನಡೆದವು.
ಮೂರು ದಿನಗಳ ಕಾಲ ವಿದ್ವಾಂಸರ ಪ್ರವಚನ, ಉಭಯ ಶ್ರೀಗಳ ಅನುಗ್ರಹ ಸಂದೇಶ, ಅಷ್ಟಾವಧಾನ, ಮಹಾಮಂಗಳಾರತಿ, ರಘೋತ್ತಮ ತೀರ್ಥರ ಕೋಟಿ ಪಾರಾಯಣ ಜಪಯಜ್ಞದ ಅಂಗವಾಗಿ ಪಂಡಿತ್ ರಾಮಾಚಾರ್ಯ ಉಮರ್ಜಿ ಅವರಿಂದ ವಿಷ್ಣುತ್ವ ನಿರ್ಣಯ ಭಾವ ಬೋಧ ಗ್ರಂಥದ ಅನುವಾದ, ಪಂಡಿತ್ ಕೆರೂರು ಕೇಶವ ಆಚಾರ್ಯ ಅವರಿಂದ ತತ್ವ ಪ್ರಕಾಶಿಕ ಭಾವ ಬೋಧ ಅನುವಾದ ಕುರಿತ ಕಾರ್ಯಕ್ರಮ ನಡೆಯಲಿವೆ.
ಮಠದ ದಿವಾನರಾದ ಪಂಡಿತ್ ಶಶಿಧರಚಾರ್ಯರು, ಉಮರ್ಜಿ ಶ್ರೀಕರಾಚಾರ್ಯಾ, ಮಹಿಷಿ ಆನಂದ ಆಚಾರ್ಯರು, ನರಸಿಂಹ ಆಚಾರ್ಯ ಯಲಬುರ್ಗಾ, ಉಮರ್ಜಿ ರಾಮಾಚಾರ್ಯರು, ಬಳ್ಳಾರಿ ರಾಘವೇಂದ್ರ ಆಚಾರ್ಯರು, ವ್ಯವಸ್ಥಾಪಕ ಅಕ್ಕಲಕೋಟ ಆನಂದಆಚಾರ್ಯರು, ಮುರಗೋಡು ವಿಜಯವಿಠಲ ಆಚಾರ್ಯರು, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ, ವಿಷ್ಣುತೀರ್ಥ ಆಚಾರ್ಯ ಜೋಶಿ, ಅಖಿಲ ಆಚಾರ್ಯ ಅತ್ರೆ, ವೆಂಕಟಗಿರಿ ಆಚಾರ್ಯ ಅನ್ವೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.