ಕಾರಟಗಿ: ಸಮೀಪದ ನಾಗನಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಆಂಜನೇಯ ಭೋವಿ ಅವರು, ₹ 26 ಸಾವಿರ ವೈಯಕ್ತಿಕ ಹಣದಲ್ಲಿ ಶಾಲೆ 160 ವಿದ್ಯಾರ್ಥಿಗಳಿಗೆ ತಲಾ 3 ರಂತೆ 480 ನೋಟ್ ಪುಸ್ತಕ ಹಾಗೂ ಕೊಕ್ಕೊ ತಂಡದ ಒಟ್ಟು 24 ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಜರ್ಸಿಗಳನ್ನು ಗುರುವಾರ ದೇಣಿಗೆಯಾಗಿ ವಿತರಿಸಿದರು.
ಬಿಆರ್ಪಿ ರಾಮಣ್ಣ ಕಂಬಳಿ ಮಾತನಾಡಿ, ‘ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರೊಂದಿಗೆ ಎಸ್ಡಿಎಂಸಿಯವರೂ ಕೈಜೋಡಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಆಂಜನೇಯ ಭೋವಿ, ವಿವಿಧ ಯೋಜನೆಗಳಡಿ ಶಾಲೆಯ ಅಭಿವೃದ್ಧಿಗೆ ಅನೇಕ ಸೌಕರ್ಯಗಳನ್ನು ಒದಗಿಸಿದ್ದರು. ಇದೀಗ ವೈಯುಕ್ತಿಕವಾಗಿ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗೂ ಕ್ರೀಡಾಪಟುಗಳಿಗೆ ಜೆರ್ಸಿಗಳನ್ನು ವಿತರಿಸಿರುವುದು ಶ್ಲಾಘನಾರ್ಹ’ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಆಂಜನೇಯ ಭೋವಿ ಮಾತನಾಡಿ, ‘ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು. ಛಲದಿಂದ ವ್ಯಾಸಂಗ ಮಾಡಿ, ಹೆಚ್ಚಿನ ಅಂಕ ಗಳಿಸಿ, ನಾವು ಯಾರಿಗೇನು ಕಡಿಮೆ ಇಲ್ಲ ಎಂಬುದನ್ನು ಆತ್ಮವಿಶ್ವಾಸದಿಂದ ಸಾಬೀತುಪಡಿಸಬೇಕು. ವಿದ್ಯಾರ್ಥಿಗಳ ಕಲಿಕೆಗೆ ಅನುವಾಗಲೆಂದು ವೈಯುಕ್ತಿಕ ಹಣದಲ್ಲಿ ನೋಟ್ಬುಕ್, ಜೆರ್ಸಿ ವಿತರಿಸಲಾಗಿದೆ. ವಿವಿಧ ಯೋಜನೆಗಳಡಿ ಸುಸಜ್ಜಿತ ನಲಿ-ಕಲಿ ಕೊಠಡಿಯನ್ನು ನಿರ್ಮಿಸಲಾಗುತ್ತಿದೆ. ನರೇಗಾ ಯೋಜನೆಯಡಿ ಸುಸಜ್ಜಿತ ಶೌಚಾಲಯ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.
ಸಿಆರ್ಪಿ ತಿಮ್ಮಣ್ಣ ನಾಯಕ, ಮುಖ್ಯಶಿಕ್ಷಕ ಸಂಗಪ್ಪ, ಎಸ್ಡಿಎಂಸಿ ಸದಸ್ಯರಾದ ವೆಂಕಟೇಶ ಕೆಂಚನಗುಡ್ಡ, ಹನುಮೇಶ ಭೋವಿ, ರಮೇಶ, ಬಸವರಾಜ, ಚಾಂದಸಾಬ, ವಲಿಸಾಬ್ ಶಿಕ್ಷಣ ಪ್ರೇಮಿ ವೀರಭದ್ರಗೌಡ, ರಮೇಶ ರಾಥೋಡ, ಶಿಕ್ಷಕರಾದ ಜಂಬುನಾಥ ತುರಾಯದ, ದುರ್ಗಾ, ವನಜಾ, ಕಾವ್ಯ, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.