ಕೊಪ್ಪಳ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವ ಆಸ್ತಿ ಮಾಲೀಕರು ನಿವೇಶನ ಸ್ವಚ್ಛಗೊಳಿಸಬೇಕು ಎಂದು ಪೌರಾಯುಕ್ತ ಗಣಪತಿ ಪಾಟೀಲ ಸೂಚನೆ ನೀಡಿದ್ದಾರೆ.
ನಿವೇಶನ ಸ್ವಚ್ಛಗೊಳಿಸಲು 15 ದಿನಗಳ ಗಡುವು ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಸ್ವಚ್ಛಗೊಳಿಸದೇ ಇದ್ದಲ್ಲಿ ನಗರಸಭೆಯಿಂದಲೇ ಸ್ವಚ್ಛಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ನಿವೇಶನದ ಮೇಲೆ ದಂಡದೊಂದಿಗೆ ಬೋಜಾ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತೆರವಿಗೆ ಸೂಚನೆ: ನಗರಸಭೆ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಅತಿಕ್ರಮಿಸಿರುವ ಸಾರ್ವಜನಿಕ ಆಸ್ತಿಗಳನ್ನು ತೆರವುಗೊಳಿಸಬೇಕು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬೀದಿಬದಿ ವ್ಯಾಪಾರಸ್ಥರು, ನಾಗರಿಕ ಸೌಲಭ್ಯ ಹಾಗೂ ಇನ್ನಿತರ ಯಾವುದೇ ಸರ್ಕಾರಿ ಆಸ್ತಿ ಅತಿಕ್ರಮಿಸಿದ ಆಸ್ತಿ ಮಾಲೀಕರು 15 ದಿನಗಳೊಳಗೆ ಅತಿಕ್ರಮಣ ತೆರವು ಮಾಡಬೇಕು. ಇಲ್ಲವಾದರೆ ಸ್ಥಳೀಯ ಸಂಸ್ಥೆಯಿಂದಲೇ ತೆರವು ಮಾಡಿ ಸಂಬಂಧಿಸಿದವರಿಂದ ಖರ್ಚು ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.