ಕಲಬುರ್ಗಿ: ‘ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಡಿ.23 ರಂದು ರಾಷ್ಟ್ರೀಯ ರೈತ ದಿನ ಆಚರಿಸಲಾಗುವುದು’ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ರೈತರ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿ ಪದಾಧಿಕಾರಿಗಳು ಹೇಳಿದರು.
‘ಅಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಟೌನ್ಹಾಲ್ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಕೃಷಿ ಕೂಲಿಕಾರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರ ಕಾರ್ಮಿಕರ ದಲಿತರ ಐಕ್ಯ ಹೋರಾಟ ಸಮಿತಿಯ ಶೌಕತ್ ಅಲಿ ಆಲೂರ ಮಾತನಾಡಿ,‘ಕೇಂದ್ರ ಸರ್ಕಾರ ರೈತರ ಜತೆ ಸಂಘರ್ಷಕ್ಕಿಳಿದಿದೆ. ಸುಪ್ರೀಂ ಕೋರ್ಟ್ನ ಮೌಖಿಕ ಆದೇಶಕ್ಕೂ ಬೆಲೆ ಕೊಡುತ್ತಿಲ್ಲ. ಬಂಡವಾಳಶಾಹಿಗಳ ಹಿತ ಒಂದೇ ಅದಕ್ಕೆ ಮುಖ್ಯ. ಸುಗ್ರಿವಾಜ್ಞೆಗಳ ಮೂಲಕ ಕಾಯ್ದೆ ತಂದು ಅವುಗಳನ್ನು ರೈತರ ಮೇಲೆ ಹೇರುತ್ತಿದೆ. ಕಪ್ಪುಪಟ್ಟಿ ಕಟ್ಟಿಕೊಳ್ಳುವ ಮೂಲಕ ಇದನ್ನು ಪ್ರತಿರೋಧಿಸಲಾಗುವುದು. ಮಾಜಿ ಶಾಸಕ ಬಿ.ಆರ್.ಪಾಟೀಲ ಭಾಗವಹಿಸಲಿದ್ದಾರೆ’ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ,‘ಸರ್ಕಾರಗಳಿಗೆ ರೈತರ ಕುರಿತು ಕನಿಷ್ಠ ಗೌರವವೂ ಇಲ್ಲ. ರೈತರ ಪ್ರತಿಭಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ರೈತರ ಮೇಲೆ ಗೌರವ ಇದ್ದರೆ, ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಹೇಳಿದರು.
ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯಾಧ್ಯಕ್ಷೆ ಜಗದೇವಿ ಆರ್. ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.