ADVERTISEMENT

ನವಲಹಳ್ಳಿ: ರಸ್ತೆ ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:08 IST
Last Updated 1 ಆಗಸ್ಟ್ 2021, 3:08 IST
ತಾವರಗೇರಾ ಸಮೀಪದ ನವಲಹಳ್ಳಿ ಜುಮಲಾಪೂರ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ
ತಾವರಗೇರಾ ಸಮೀಪದ ನವಲಹಳ್ಳಿ ಜುಮಲಾಪೂರ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ   

ತಾವರಗೇರಾ: ಸಮೀಪದ ನವಲಹಳ್ಳಿ ಗ್ರಾಮದಿಂದ ಜುಮಲಾಪೂರ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ರೈತರು ವಿರೋಧ ವ್ಯಕ್ತ ಪಡಿಸಿದ್ದು, ಗುತ್ತಿಗೆದಾರರು 6 ದಿನಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಅಡಿಯಲ್ಲಿ ಈ ರಸ್ತೆ ಮಂಜೂರಾಗಿದೆ.

ಇದು ತಾವರಗೇರಾ, ನಂದಾಪೂರ, ನವಲಹಳ್ಳಿ ಹಾಗೂ ಜುಮಲಾಪೂರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ADVERTISEMENT

ಒಟ್ಟು 16 ಕಿ.ಮೀ ಉದ್ದ ಹಾಗೂ 30 ಅಡಿ ಅಗಲ ಕಾಮಗಾರಿ ನಡೆದಿದ್ದು, ಯೋಜನೆಯಲ್ಲಿ ನಿಯಮಾವಳಿಯಂತೆ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕೆಲಸ ಮುಗಿಸಬೇಕಿದೆ.

ಸರ್ಕಾರದ ನಿಯಮಾವಳಿ ಪ್ರಕಾರ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಇದರಿಂದ ಪಕ್ಕದ ಕೆಲ ಜಮೀನುಗಳಿಗೆ ಕಂಟಕ ಎದುರಾಗಿದೆ. ರೈತರು ರಸ್ತೆ ಅಗಲವನ್ನು ಕಡಿಮೆಗೊಳಿಸಿ ಹೊಸ ರಸ್ತೆ ನಿರ್ಮಿಸಲು ಆಗ್ರಹಿಸುತ್ತಿದ್ದಾರೆ.

ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿಗದಿತ ಅಳತೆಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ.

ಗ್ರಾಮದ ಕಂದಾಯ ನಕ್ಷೆಯಲ್ಲಿ ಈ ದಾರಿ ಇಲ್ಲ. ಆದರೂ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರೈತರ ವಿರೋಧದ ನಡುವೆ ಕಾಮಗಾರಿ ನಡೆಸಿದರೆ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಗ್ರಾಮದ ಶಂಕ್ರಪ್ಪ ಕ್ಯಾವಟರ್ ಹಾಗೂ ಶರಣಪ್ಪ ನಿಂಗಪ್ಪ ತುರ್ವಿಹಾಳ ತಿಳಿಸಿದ್ದಾರೆ. ಮಾಹಿತಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಗ್ರಾಮಸ್ಥರ ಸ್ಪಂದನೆ: ನವಲಹಳ್ಳಿ ಜುಮಲಾಪೂರ ಸಂಪರ್ಕ ರಸ್ತೆ ನಿರ್ಮಾಣದಿಂದ ರೈತರಿಗೆ ಸಂತಸವಾಗಲಿದೆ. ಈ ಭಾಗದ ಜಮೀನುಗಳಿಗೆ ಹೋಗುವ ರೈತರು ಮಳೆಗಾಲದಲ್ಲಿ ಹಳ್ಳದ ನೀರಿನಲ್ಲಿ ಎತ್ತಿನ ಬಂಡಿ ಜತೆಗೆ ಜಮೀನು ತಲುಪಲು ಹರಸಾಹಸ ಪಡುತ್ತಿದ್ದು, ಎಷ್ಟೋ ವರ್ಷಗಳ ನಂತರ ಈ ರಸ್ತೆ ನಿರ್ಮಾಣ ಮಾಡುತ್ತಿದ್ದು, ಕೆಲವು ಜಮೀನುಗಳ ರೈತರು ಮಾತ್ರ ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಅಧಿಕಾರಿಗಳು, ಗ್ರಾಮದ ಪ್ರಮುಖರು, ರೈತರೊಂದಿಗೆ ಚರ್ಚಿಸಿ ಸೂಕ್ತ ತಿರ್ಮಾನ ಮಾಡುವ ಮೂಲಕ ಕಾಮಗಾರಿ ನಡೆಸಿದರೆ ಅನೂಕೂಲವಾಗುತ್ತದೆ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.